ಮುಂದಿನ ದಿನಗಳಲ್ಲಿ ವೀರಶೈವ-ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕು
ಸಂಜೆವಾಣಿ ವಾರ್ತೆ
ಕಲಬುರ್ಗಿ-ಜೂ.೩೦; ಕರ್ನಾಟಕ ರಾಜ್ಯದಲ್ಲಿ ಮುಖ್ಯ ಮಂತ್ರಿ ಉಪಮುಖ್ಯ ಮಂತ್ರಿ ಸ್ಥಾನಗಳ ಕುರಿತು ವ್ಯಾಪಕ ಚರ್ಚೆಯಾಗುತ್ತಿದ್ದು ಈ ಸಂಬಂಧವಾಗಿ ಕಾಂಗ್ರೆಸ್ ಹೈ ಕಮಾಂಡ ಉದಾಸೀನ ಮಾಡದೇ ಶೀಘ್ರವಾಗಿ ಒಂದು ಸೂಕ್ತ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಕಲಬುರ್ಗಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು ಸರ್ಕಾರದ ಬಹುತೇಕ ಸಂಪನ್ಮೂಲ ಗ್ಯಾರಂಟಿ ಯೋಜನೆಗಳಿಗಾಗಿ ವಿನಿಯೋಗವಾಗುತ್ತಿದ್ದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗುತ್ತಿದೆ. ಈ ಕುರಿತು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು. ಜನತೆಗೆ ದುಡಿದು ತಿನ್ನುವ ಅವಕಾಶ ಕಲ್ಪಿಸಬೇಕೆ ಹೊರತು ಅವರನ್ನು ಸೋಮಾರಿಗಳನ್ನಾಗಿ ಮಾಡಬಾರದು.ಕಾಂಗ್ರೆಸ್‌ನ 135 ಶಾಸಕರು ಆಯ್ಕೆಯಾಗಿ ಬರುವಲ್ಲಿ ವೀರಶೈವ ಲಿಂಗಾಯತ ಸಮಾಜದ ಪಾತ್ರವೂ ಬಹಳಷ್ಟಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದಲ್ಲಿ ಸ್ಥಾನಮಾನಗಳನ್ನು ಬದಲಾವಣೆ ಮಾಡುವ ಸಂದರ್ಭ ಏನಾದರೂ ಒದಗಿ ಬಂದಲ್ಲಿ ವೀರಶೈವ-ಲಿಂಗಾಯತ ಶಾಸಕರಿಗೆ ಸರ್ಕಾರದ ಉನ್ನತ ಜವಾಬ್ದಾರಿ ಸ್ಥಾನ ನೀಡಬೇಕು. ಅನೇಕ ಹಿರಿಯ ಶಾಸಕರು ವೀರಶೈವ ಲಿಂಗಾಯತ ಸಮಾಜವನ್ನು ಪ್ರತಿನಿಧಿಸುತ್ತಿದ್ದು ಸೂಕ್ತ ವ್ಯಕ್ತಿಗಳಿಗೆ ವಿಶೇಷ ಸ್ಥಾನ ಮಾನ ಕಲ್ಪಿಸಿಕೊಡಬೇಕೆಂಬುದು ತಮ್ಮ ಅಭಿಪ್ರಾಯವಾಗಿದೆ ಎಂದರು. ಈ ಸಂದರ್ಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.