ಬೆಂಗಳೂರು: ನಿನ್ನೆ ನಿಧನರಾದ ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರ ದೇಹದಾನಕ್ಕೆ ಅವರ ಕುಟುಂಬ ನಿರ್ಧರಿಸಿತ್ತು. ಅದರಂತೆ ಇಂದು ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ಭಾರ್ಗವಿ ನಾರಾಯಣ್ ಅವರ ದೇಹದಾನ ಮಾಡಲಾಯಿತು. ಬೆಳ್ಳಗ್ಗೆ 11 ಗಂಟೆಯವರೆಗೆ ಭಾರ್ಗವಿ ಅವರ ಸ್ವಗೃಹದಲ್ಲಿಯೇ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿತ್ತು. ನಂತರ ಅಲ್ಲಿಂದ ಪಾರ್ಥಿವ ಶರೀರವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಯಿತು.
ದೇಹದಾನ ಮತ್ತು ಕಣ್ಣುದಾನ ಮಾಡಬೇಕು ಎನ್ನುವುದು ಸ್ವತಃ ಭಾರ್ಗವಿ ನಾರಾಯಣ್ ಅವರ ಆಸೆಯಾಗಿತ್ತಂತೆ. ಹಾಗಾಗಿ ಅವರ ಆಸೆಯನ್ನು ಕುಟುಂಬ ಈಡೇರಿಸಿದೆ ಎಂದು ನಟ, ನಿರ್ದೇಶಕ ಹಾಗೂ ಭಾರ್ಗವಿ ನಾರಾಯಣ್ ಅವರ ಪುತ್ರ ಪ್ರಕಾಶ್ ಬೆಳವಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಬರಲು ಬಿಡಲ್ಲ: ಸಚಿವ ಅಶ್ವತ್ಥ ನಾರಾಯಣ
ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ರಂಗದಲ್ಲಿ ಏಕಕಾಲಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಭಾರ್ಗವಿ ನಾರಾಯಣ್. ಅಲ್ಲದೇ, ಹಲವು ಕೃತಿಗಳನ್ನು ಕೂಡ ಅವರು ರಚಿಸಿದ್ದಾರೆ. ‘ನಾನು ಭಾರ್ಗವಿ’ ಅವರ ಆತ್ಮಕಥೆ ಪುಸ್ತಕ. ಕನ್ನಡದ ಖ್ಯಾತ ಪ್ರಸಾಧನ ಕಲಾವಿದರಾಗಿದ್ದ ಮೇಕಪ್ ನಾಣಿ ಅವರ ಪತಿ. ಅವರೊಂದಿಗೆನ ಬದುಕಿನ ಹಲವು ಮಜಲುಗಳನ್ನು ಪುಸ್ತಕ ರೂಪದಲ್ಲಿಯೇ ಭಾರ್ಗವಿ ನಾರಾಯಣ್ ಅವರು ದಾಖಲಿಸಿದ್ದರು.
ಮಹಿಳೆಯರು ನಾಟಕದಲ್ಲಿ ನಟಿಸುವುದಕ್ಕೆ ಒಪ್ಪದವಾಗದ ದಿನಗಳಲ್ಲಿ ಅವರು ನಾಟಕ ರಂಗ ಪ್ರವೇಶಿಸಿದರು. ಬೆಂಗಳೂರಿನ ಅನೇಕ ಹವ್ಯಾಸ ನಾಟಕ ತಂಡಗಳ ಜತೆ ಕೆಲಸ ಮಾಡಿದ ಹೆಗ್ಗಳಿಕೆ ಇವರದ್ದು. ಪುತ್ರಿ ಸುಧಾ ಬೆಳವಾಡಿ, ಪುತ್ರ ಪ್ರಕಾಶ್ ಬೆಳವಾಡಿ ಮತ್ತು ಮೊಮ್ಮಕ್ಕಳಾದ ಸಂಯುಕ್ತ ಹೊರನಾಡು ಹೀಗೆ ಈ ಕುಟುಂಬದಿಂದ ಅನೇಕ ಕಲಾವಿದರು ಬಣ್ಣದ ಲೋಕದಲ್ಲಿದ್ದಾರೆ.Sign in to your account
Username or Email Address


Password

 Remember Me


