ಮಂಡ್ಯ: ಕಟ್ಟಡ ನಿರ್ಮಾಣ, ಚಲನಚಿತ್ರೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ಪ್ರತಿಷ್ಠಿತ ಹೊಂಬಾಳೆ ಸಮೂಹದ ಆರ್ಥಿಕ ನೆರವಿನಿಂದ ಕೆ.ಆರ್.ಪೇಟೆ, ಪಾಂಡವಪುರ ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ.ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಂಗಳವಾರ ಈ ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡಿದರು. ಪ್ರತಿ ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಈ ಆಮ್ಲಜನಕ ಘಟಕಗಳು, ಜನರಿಗೆ ಬಹಳ ಉಪಯುಕ್ತವಾಗುತ್ತವೆ. ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಯನ್ನು ಬಲಪಡಿಸಲು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಂಬಾಳೆ ಸಮೂಹದ ಕೊಡುಗೆ ಶ್ಲಾಘನೀಯ ಎಂದರು. ಇದನ್ನೂ ಓದಿ: ರಾಜ್ಯದಲ್ಲಿಂದು 851 ಹೊಸ ಕೊರೊನಾ ಕೇಸ್- 790 ಡಿಸ್ಚಾರ್ಜ್, 15 ಸಾವುನಿರ್ಮಾಣ ವಲಯ ಮತ್ತು ಚಲನಚಿತ್ರೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಹೊಂಬಾಳೆ ಸಮೂಹವು ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳ ವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಅವರು ತಮ್ಮ ತವರು ಜಿಲ್ಲೆಯ ಜನರ ಆರೋಗ್ಯ ಸೌಲಭ್ಯಕ್ಕಾಗಿ ಮುಕ್ತ ಮನಸ್ಸಿನಿಂದ ನೆರವು ನೀಡುತ್ತಿದ್ದಾರೆ. ಈಗ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮತ್ತು ಪಾಂಡವಪುರದ ಸರ್ಕಾರಿ ಆಸ್ಪತ್ರೆಗಳಿಗೆ ತಲಾ 1 ಕೋಟಿಯಂತೆ ಒಟ್ಟು 2 ಕೋಟಿ ರೂ. ವೆಚ್ಚದಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.ಈ ಬಗ್ಗೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕಿರಗಂದೂರು ಮಾತನಾಡಿ, ಮಂಡ್ಯ ನನ್ನ ತವರು ಜಿಲ್ಲೆ, ಎಲ್ಲೆಡೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳಿರಬೇಕು ಎಂಬುದು ನನ್ನ ಕಾಳಜಿ. ಪ್ರತಿ ಸಣ್ಣ ಸಮಸ್ಯೆಗೂ ಜನರು ಬೆಂಗಳೂರಿಗೆ ಅಥವಾ ಮೈಸೂರಿಗೆ ಓಡುವ ಪ್ರಮೇಯ ಬೇಡ. ಗ್ರಾಮೀಣ ಭಾಗದ ಜನರು ಆರೋಗ್ಯಕ್ಕಾಗಿ ದೊಡ್ಡ ನಗರಗಳನ್ನು ಅವಲಂಬಿಸುವುದನ್ನು ಕಡಿಮೆಗೊಳಿಸಬೇಕು ಎಂಬುದೇ ನನ್ನ ಆಶಯ. ಈ ಘಟಕಗಳು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮಥ್ರ್ಯ ಹೊಂದಿವೆ ಎಂದು ತಿಳಿಸಿದರು.ಮಂಡ್ಯ ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹೊಂಬಾಳೆ ಸಂಸ್ಥೆ ನೆರವಿನಿಂದ ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ 20 ಹಾಸಿಗೆಗಳ ಅತ್ಯಾಧುನಿಕ ಐಸಿಯುವನ್ನು ಸ್ಥಾಪಿಸಲಾಗಿದ್ದು, ಸುಮಾರು 3 ತಿಂಗಳ ಹಿಂದೆ ಇದರ ಲೋಕಾರ್ಪಣೆ ಮಾಡಿದ್ದನ್ನು ಇಲ್ಲಿ ನೆನೆಯಬಹುದು.ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ನಾರಾಯಣಗೌಡ ಮತ್ತು ಪಾಂಡವಪುರ ಶಾಸಕ ಸಿ.ಎಸ್.ಪುಟ್ಟರಾಜು, ಹೊಂಬಾಳೆ ಸಮೂಹದ ನಿರ್ದೇಶಕ ಚೆಲುವೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮುಂತಾದವರು ಹಾಜರಿದ್ದರು.Sign in to your account
Username or Email Address


Password

 Remember Me


