ಚಿಕ್ಕಮಗಳೂರು: ಕಳೆದ ಎರಡ್ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದ ಕೊಚ್ಚಿ ಹೋಗಿದ್ದ ಕಾಫಿ ಬೀಜಗಳನ್ನು ಬೆಳೆಗಾರರು ರಸ್ತೆ ಬದಿಯ ಗುಂಡಿ-ಗೊಟರುಗಳಲ್ಲಿ ಹುಡುಕಾಡುವ ಪರಿಸ್ಥಿತಿ ಚಿಕ್ಕಮಗಳೂರಿನ ಹಲವು ಭಾಗಗಳಲ್ಲಿ ನಿರ್ಮಾಣವಾಗಿದೆ.ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು ಭಾಗದ ರಸ್ತೆ ಬದಿಗಳಲ್ಲಿ ಕಾಫಿ ಬೀಜಗಳಿಗಾಗಿ ಹುಡುಕಾಡುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಮಲೆನಾಡಿನ ಬಹುತೇಕ ಭಾಗ ಕಾಫಿ ಬೆಳೆಯನ್ನೇ ನಂಬಿಕೊಂಡು ಬದುಕುತ್ತಿದೆ. ಜಿಲ್ಲೆಯಲ್ಲಿರೋ ಬಹುತೇಕ ಕಾಫಿ ಬೆಳೆಗಾರರಲ್ಲಿ ಶೇ.60-70 ರಷ್ಟು ಬೆಳೆಗಾರರು ಮಧ್ಯಮ ವರ್ಗದ ಬೆಳೆಗಾರರು. ನಾಲ್ಕೈದು ಎಕರೆ ಕಾಫಿ ತೋಟದಲ್ಲಿ ಬದುಕು ಕಟ್ಟಿಕೊಂಡಿರೋ ಅವರಿಗೆಲ್ಲಾ ಒಂದೊಂದು ಕಾಫಿ ಬೀಜ ಮುಖ್ಯವಾಗಿದೆ.ಆದರೆ ಈ ವರ್ಷದ ಮಳೆ ಅರ್ಧ ಕಾಫಿಯನ್ನ ನಾಶ ಮಾಡಿತ್ತು. ಕಳೆದ ಡಿಸೆಂಬರ್-ಜನವರಿಯಲ್ಲಿ ಸುರಿದ ಮಳೆ ಮತ್ತಷ್ಟು ಕಾಫಿಯನ್ನ ಮಣ್ಣು ಪಾಲು ಮಾಡಿತ್ತು. ಆದರೆ, ಈಗ ಕಳೆದ ಎರಡ್ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆ ಗಿಡದಲ್ಲಿದ್ದ ಹಾಗೂ ಅಂಗಳದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕೊಚ್ಚಿ ಹೋಗುವಂತೆ ಮಾಡಿದೆ.ಇಂದು ಮಳೆ ಕಡಿಮೆಯಾದ ಹಿನ್ನೆಲೆ ಸಣ್ಣ ಹಾಗೂ ಮಧ್ಯಮ ವರ್ಗದ ಬೆಳೆಗಾರರು ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದ ಕಾಫಿಯನ್ನ ಹುಡುಕಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆಯಿಂದ ಬಹುತೇಕ ಕಾಫಿಯನ್ನ ಕಿತ್ತಿಲ್ಲ ಗಿಡದಲ್ಲಿಯೇ ಇದೆ. ಕೆಲ ಭಾಗ ಕಾಫಿ ಉದುರುತ್ತಿದ್ದರೆ, ಕೆಲ ಭಾಗದಲ್ಲಿ ಗಿಡದಲ್ಲೇ ಕೊಳೆಯುತ್ತಿದೆ. ಬೆಳೆಗಾರರ ಆತಂಕವನ್ನುಂಟು ಮಾಡಿದೆ. ಮುಂದಿನ ಬೆಳೆಯೂ ಸಮರ್ಪಕವಾಗಿ ಕೈಗೆ ಸಿಗುವ ಬಗ್ಗೆ ಬೆಳೆಗಾರರೇ ವಿಶ್ವಾಸ ಕಳೆದುಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


