ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇಂದು ಮತ್ತೆ ವರುಣನ ದರ್ಶನವಾಗಿದೆ. ಬೆಳಗಾವಿ, ಮಂಡ್ಯ, ಹುಬ್ಬಳ್ಳಿ, ಹಾಸನ, ಸೇರಿ ಹಲವೆಡೆ ಇಂದು ಸುರಿದ ಮಳೆಯಿಂದಾಗಿ ಸ್ವಲ್ಪ ಮಟ್ಟಿಗೆ ವರುಣ ತಂಪೆರೆದಂತಾಗಿದೆ.ಕುಂದಾನಗರಿ ಬೆಳಗಾವಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಬೆಳಗಾವಿಯ ಲಕ್ಷ್ಮೀ ನಗರದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಏಕಾಏಕಿ ಮಳೆ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ದೂರದ ಊರಿಂದ ಬಂದಂತಹ ರೈತರು, ವ್ಯಾಪಾರಸ್ಥರು ಪರದಾಡುವಂತಾಗಿತ್ತು. ಸವದತ್ತಿಯಲ್ಲೂ ಮಳೆಯಾಗಿದ್ದು, ಶ್ರೀಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬಂದ ಭಕ್ತರು ಮಳೆಯಿಂದಾಗಿ ಪರದಾಡುವಂತಾಗಿತ್ತು. ಇತ್ತ ಮಳೆ ಸುರಿಯುತ್ತಿದ್ದರು ಅತ್ತ ಮಳೆಯಲ್ಲೂ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು.ಶ್ರೀರಂಗಪಟ್ಟಣದಲ್ಲಿ ಅಕಾಲಿಕ ಮಳೆಯಿಂದ ಸಾರ್ವಜನಿಕರ ತೊಂದರೆಗೊಳಗಾದರು. ಕೆಆರ್‍ಎಸ್ ವ್ಯಾಪ್ತಿ ಸೇರಿದಂತೆ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ. ಹಾವೇರಿಯ ರಾಣೆಬೆನ್ನೂರು, ಹಿರೇಕೆರೂರುಗಳಲ್ಲಿ ಗಾಳಿ ಸಮೇತ ಮಳೆಯಾಗಿದೆ. ಅರ್ಧ ಗಂಟೆ ಕಾಲ ಸುರಿದ ಅಕಾಲಿಕ ಮಳೆಯೊಂದಿಗೆ ಕೆಲವೆಡೆ ಆಲಿಕಲ್ಲು ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣ ಮೂಡಿದೆ. ಹಾಗೆ ಹುಬ್ಬಳ್ಳಿ, ಹಾಸನದ ಹಲವು ಭಾಗಗಳಲ್ಲೂ ಮಳೆರಾಯ ತಂಪೆರೆದಿದ್ದಾನೆ. ಒಟ್ಟಿನಲ್ಲಿ ಬಿಸಿಲ ಧಗೆಯಿಂದ ಕಂಗಾಲಾಗಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. 






 Advertisement 




Sign in to your account
Username or Email Address


Password

 Remember Me


