ಬೆಂಗಳೂರು: ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲ್ ಜನರಲ್ ಜುಡಿತ್ ರಾವಿನ್ ಅವರು ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಹಾಗೂ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆದರು.ಸೋಮವಾರ ಸಂಜೆ ಭೇಟಿ ಮಾಡಿದ ಅವರು, ಮಾಹಿತಿ ತಂತ್ರಜ್ಞಾನ ಉದ್ಯಮ ಉತ್ತೇಜಿಸಲು ಜಾರಿಗೊಳಿಸಲಾಗಿರುವ ಪ್ರೋತ್ಸಾಹಕ ಕ್ರಮಗಳು, ಭೂಸುಧಾರಣಾ ಕಾನೂನು ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಪವರ್ ಪಾಯಿಂಟ್ ವಿಷಯ ಪ್ರಸ್ತುತಿ ಮಾಡಲಾಯಿತು.ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಎಸ್‍ಡಿಎಂ ಪರ್ಯಾವರಣಗಳ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಪ್ರಸ್ತುತಪಡಿಸಿದರು. ರಾಜ್ಯದಲ್ಲಿರುವ ಪರಿಪೋಷಕಗಳು, ಆಕ್ಸಲರೇಟರ್ ಗಳು, ನವೋದ್ಯಮಗಳಲ್ಲಿ ಹೂಡಿಕೆ, ಕೌಶಲ್ಯ ಸುಧಾರಣೆ ಹಾಗೂ ಪರಸ್ಪರ ಸಹಭಾಗಿತ್ವಕ್ಕೆ ಇರುವ ಅವಕಾಶಗಳ ಕುರಿತು ರಾಜ್ಯ ನವೋದ್ಯಮಗಳ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಪವರ್ ಪಾಯಿಂಟ್ ಕುರಿತು ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ ಅವರು, ರಾಜ್ಯದಲ್ಲಿರುವ ಅಮೆರಿಕದ ಕಂಪನಿಗಳು ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ ಹೆಚ್ಚಿನ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಅವಕಾಶಗಳಿದ್ದು, ರಾಜ್ಯ ಸರ್ಕಾರದ ಸಹಭಾಗಿತ್ವ ಸೇರಿದಂತೆ ಯಾವುದೇ ರೀತಿಯಲ್ಲಿ ಕೈಜೋಡಿಸಲು ಸಿದ್ಧವಿದೆ ಎಂದು ತಿಳಿಸಿದರು.ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‍ಎಂಎಸ್), ವಿಶ್ವವಿದ್ಯಾಲಯ ಏಕೀಕೃತ ನಿರ್ವಹಣಾ ವ್ಯವಸ್ಥೆ, ಡಿಪ್ಲೊಮಾ ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ತಿಳಿಸಿದರು.ಇದಕ್ಕೂ ಮುನ್ನ ಅಮೆರಿಕಾ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಈ ವೇಳೆ ಸರ್ಕಾರದ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜುಡಿತ್ ರಾವಿನ್ ಅವರು, ಮೆಸಾಚ್ಯುಯೇಟ್ಸ್ ತಾಂತ್ರಿಕ ವಿಶ್ವವಿದ್ಯಾಲಯ (ಎಂಐಟಿ)ದ ನೇತೃತ್ವದಲ್ಲಿ ಸಹಭಾಗಿತ್ವ ಸೇರಿದಂತೆ ಹಲವು ರೀತಿಗಳಲ್ಲಿ ಇಲ್ಲಿನ ಯೋಜನೆಗಳಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದರು. ಕರ್ನಾಟಕದ ಜೊತೆಗೆ ಅಮೆರಿಕಾ ಭಾಂದವ್ಯ ಚೆನ್ನಾಗಿದೆ. ಅಮೆರಿಕಾದ ಸಾಕಷ್ಟು ನಾಗರಿಕರು ಇಲ್ಲಿ ನೆಲೆಸಿದ್ದಾರೆ. ವಿವಿಧ ಉದ್ಯಮಗಳಲ್ಲಿ ಅಮೆರಿಕಾ ಸಹಭಾಗಿತ್ವ ಇದೆ. ಹೀಗಾಗಿ ಏರ್ ಶೋ ನಮ್ಮ ಪಾಲಿಗೆ ಮಹತ್ವದ್ದು. ಏರ್ ಶೋ ಆಯೋಜನೆಗೆ ಸರ್ಕಾರ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಹೀಗಾಗಿ ತುಂಬಾ ನಿರೀಕ್ಷೆಯಲ್ಲಿದ್ದೇವೆ ಜುಡಿತ್ ರಾವಿನ್ ತಿಳಿಸಿದರು.ಅಮೆರಿಕಾ ರಾಯಭಾರಿ ಕಚೇರಿಯ ಪ್ರಭಾರಿ ರಾಯಭಾರಿ ಡೊನಾಲ್ಡ್ ಹೆಫ್ಲಿನ್ ಮಾತನಾಡಿ, ಕೊರೊನಾ ನಿರ್ಭಂದಗಳ ನಡುವೆ ಕರ್ನಾಟಕ ಸರ್ಕಾರ ಏರ್ ಶೋ ಗೆ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದೆ, ಖುಷಿಯಾಗಿದೆ. ಅಮೆರಿಕಾದ ದೊಡ್ಡ ನಿಯೋಗವೇ ಈ ಶೋನಲ್ಲಿ ಪಾಲ್ಗೊಳ್ಳಲಿದೆ. ತುಂಬಾ ಉಪಯುಕ್ತ ಮತ್ತು ಯಶಸ್ವಿಯಾಗಲಿದೆ ಎಂದರು.ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ, ಅಮೆರಿಕ ಕಾನ್ಸುಲ್ ಜನರಲ್ ಕಚೇರಿಯ ರಾಜಕೀಯ, ಆರ್ಥಿಕ ವಿಷಯ ತಜ್ಞ ಎಚ್.ಭರತ್ ಕುಮಾರ್ ಇದ್ದರು.Sign in to your account
Username or Email Address


Password

 Remember Me


