ಬೆಂಗಳೂರು: ವಿವಾದಿತ ಕೃತಿ ಖರೀದಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ವಿವಾದಕ್ಕೀಡಾದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೂಡಲೇ ಎಚ್ಚೆತ್ತು ಸ್ಪಷ್ಟನೆ ನೀಡಿದ್ದಾರೆ. ಜನರ ಭಾವನೆಗಳಿಗೆ ಧಕ್ಕೆ ತರಬಹುದಾದ ಯಾವುದೇ ಪುಸ್ತಕಗಳನ್ನು ಇಲಾಖೆ ಖರೀದಿಸುವುದಿಲ್ಲ ಎಂದು ತಿಳಿಸಿದ್ದಾರೆ.ಈ ಸಂಬಂಧ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಸಚಿವರು, ವಿವಿಧ ಪ್ರಕಾಶನಗಳು ಪ್ರತಿ ವರ್ಷ ಆಯಾ ಸಾಲಿನಲ್ಲಿ ಪ್ರಕಟಿಸುವ ಹತ್ತಾರು ಸಾವಿರ ಪುಸ್ತಕಗಳು ರಾಜ್ಯ ಕೇಂದ್ರ ಗ್ರಂಥಾಲಯದ ಗ್ರಂಥಸ್ವಾಮ್ಯ ವಿಭಾಗಕ್ಕೆ ಸಲ್ಲಿಕೆಯಾಗುತ್ತವೆ. ಈ ಎಲ್ಲ ಪುಸ್ತಕಗಳನ್ನು ಆಯ್ಕೆ ಸಮಿತಿ ಕೂಲಂಕುಷವಾಗಿ ಪರಿಶೀಲಿಸಿ ಪಟ್ಟಿ ಅಂತಿಮಗೊಳಿಸಿ ತಾತ್ವಿಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸುವುದು ನಿರಂತರ ಪ್ರಕ್ರಿಯೆ.ಪ್ರಸ್ತುತ ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಾಮಾನ್ಯವಾಗಿ ಆಯ್ಕೆ ಸಮಿತಿಯು ಪರಿಶೀಲಿಸಿ ಅಂತಿಮಗೊಳಿಸುವ ಎಲ್ಲ ಪುಸ್ತಕಗಳನ್ನು ಖರೀದಿಸಲು ಸರ್ಕಾರ ಅನುಮೋದನೆ ನೀಡುವುದು ಅನೂಚಾನವಾಗಿ ನಡೆದು ಬಂದ ಪ್ರಕ್ರಿಯೆ. 2017ನೇ ಸಾಲಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ 2018ರಲ್ಲಿ 10571 ಪುಸ್ತಕಗಳು ಸ್ವೀಕೃತವಾಗಿವೆ.ಈ ಪೈಕಿ ಆಯ್ಕೆ ಸಮಿತಿ ಆಯ್ಕೆ ಮಾಡಿದ 5109 ಪುಸ್ತಕಗಳಲ್ಲಿ ಮೊದಲ 350 ಪುಸ್ತಕಗಳನ್ನು ಮಾತ್ರ ರಾಜಾರಾಂ ಮೋಹನ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಮೂಲಕ ರಾಜ್ಯದ ವಿವಿಧ ಗ್ರಂಥಾಲಯಗಳಿಗೆ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಉಳಿದ ಯಾವುದೇ ಪುಸ್ತಕಗಳ ಖರೀದಿಗೆ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಈ ವಿವಾದಿತ ಪುಸ್ತಕವು ಪಟ್ಟಿಯಲ್ಲಿ 4062ನೇ ಕ್ರಮ ಸಂಖ್ಯೆಯಲ್ಲಿದೆ. ಈ ತನಕ ಈ ಪುಸ್ತಕವೂ ಸೇರಿದಂತೆ ಯಾವುದೇ ಖರೀದಿ ನಡೆದಿಲ್ಲ.ಕರ್ನಾಟಕದ ಎಲ್ಲ (ಯಾವುದೇ) ಗ್ರಂಥಾಲಯಗಳಲ್ಲೂ ಈ ಪುಸ್ತಕ ಓದಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಕ್ರಮ ವಹಿಸಲು ಸಮಿತಿಯ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಮಂಡಿಸಲು ಸಹ ನಿರ್ದೇಶನ ನೀಡಲಾಗಿದೆ. ಯಾವುದೇ ರೀತಿಯಲ್ಲಿ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯಾಗಬಹುದಾದಂತಹ ಪುಸ್ತಕಗಳನ್ನು ಇಲಾಖೆ ಖರೀದಿಸುವುದಿಲ್ಲ. ಅಂತಹ ಯಾವುದೇ ಕ್ರಮವನ್ನು ನಾನು ಪ್ರೋತ್ಸಾಹಿಸುವುದಿಲ್ಲ ಎಂದು ಸಚಿವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.ಏನಿದು ವಿವಾದ..?
ರಾಜ್ಯ ಗ್ರಂಥಾಲಯ ಇಲಾಖೆ ಪ್ರತಿ ವರ್ಷ ವಿವಿಧ ಲೇಖಕರ ಕೃತಿ ಖರೀದಿ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆ, ತಾಲೂಕು ಗ್ರಂಥಾಲಯಗಳಿಗೆ ಕೃತಿಗಳ ಹಂಚಿಕೆ ಮಾಡಲಾಗುತ್ತಿದೆ. ಸಾಹಿತಿ ದೊಡ್ಡರಂಗೇಗೌಡ ಅಧ್ಯಕ್ಷತೆಯ ಪುಸ್ತಕ ಆಯ್ಕೆ ಸಮಿತಿಯಿಂದ 5109 ಕೃತಿ ಆಯ್ಕೆ ಮಾಡಿದ್ದು, 5109 ಕೃತಿಗಳ ಪೈಕಿ ‘ರಾಮ ಮಂದಿರ ಯಾಕೆ ಬೇಡ?’ ಕೂಡ ಒಂದಾಗಿದೆ. ವಿವಾದಿತ ಸಾಹಿತಿ ಕೆ.ಎಸ್ ಭಗವಾನ್ ಬರೆದಿರುವ `ರಾಮ ಮಂದಿರ ಯಾಕೆ ಬೇಡ?’ ಕೃತಿಯನ್ನು ಸಮಿತಿ ಶಿಫಾರಸು ಮಾಡಿದ ಪಟ್ಟಿಗೆ ಹಿಂದೆ-ಮುಂದೆ ನೋಡದೇ ಸಚಿವರು ಸಹಿ ಮಾಡಿದ್ದು, ವಿವಾದ ಎಬ್ಬಿಸಿತ್ತು.ವಿವಿಧ ಪ್ರಕಾಶನಗಳು ಪ್ರತಿ ವರ್ಷ ಆಯಾ ಸಾಲಿನಲ್ಲಿ ಪ್ರಕಟಿಸುವ ಹತ್ತಾರು ಸಾವಿರ ಪುಸ್ತಕಗಳು ರಾಜ್ಯ ಕೇಂದ್ರ ಗ್ರಂಥಾಲಯದ ಗ್ರಂಥಸ್ವಾಮ್ಯ…Posted by Suresh Kumar S on Monday, January 18, 2021Sign in to your account
Username or Email Address


Password

 Remember Me


