ನಿರ್ದೇಶಕ ಸುಕ್ಕಾ ಸೂರಿ ಗರಡಿಯಲ್ಲಿ ಪಳಗಿ ಕೆಂಡಸಂಪಿಗೆ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತನಾದ ಉದಯೋನ್ಮುಕ ನಟ ವಿಕ್ಕಿ ವರುಣ್. ಕೆಂಡಸಂಪಿಗೆ ಚಿತ್ರದಲ್ಲಿನ ಇವರ ಮುಗ್ಧ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಮೊದಲ ಚಿತ್ರದ ಗೆಲುವಿನ ನಂತರ ಕಾಲೇಜ್ ಕುಮಾರನಾಗಿ ತೆರೆ ಮೇಲೆ ಎಂಟ್ರಿ ಕೊಟ್ಟ ವಿಕ್ಕಿ ವರುಣ್ ಎರಡನೇ ಸಿನಿಮಾದಲ್ಲೂ ಸಕ್ಸಸ್ ಕಾಣುವ ಮೂಲಕ ಖ್ಯಾತಿ ಗಳಿಸಿದ್ರು. ಸಿನಿಮಾ ಆಯ್ಕೆ ವಿಚಾರದಲ್ಲಿ ಸಖತ್ ಚ್ಯುಸಿಯಾಗಿರುವ ವಿಕ್ಕಿ ವರುಣ್ ಬಹಳ ದಿನಗಳ ನಂತರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಕುತೂಹಲ ಮೂಡಿಸಿದೆ.ಕೆಂಡ ಸಂಪಿಗೆ, ಕಾಲೇಜ್ ಕುಮಾರ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಂತರ ವಿಕ್ಕಿ ವರುಣ್ ಒಪ್ಪಿಕೊಂಡಿರುವ ನೂತನ ಚಿತ್ರ ‘ಕಾಲಾ ಪತ್ಥರ್’. ಚಿತ್ರದ ವಿಭಿನ್ನ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ನಟಿಸಿದ ಎರಡೂ ಸಿನಿಮಾಗಳು ಹಿಟ್ ಆಗಿರೋದ್ರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಮೂರನೇ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ ವಿಕ್ಕಿ ವರುಣ್. ‘ಕಾಲಾ ಪತ್ಥರ್’ ಸಿನಿಮಾ ಭಿನ್ನವಾಗಿದ್ದು ಖಂಡಿತಾ ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗುತ್ತೆ ಎನ್ನುತ್ತಾರೆ ನಟ ವಿಕ್ಕಿ ವರುಣ್.ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಗುರುತಿಸಿಕೊಂಡಿರುವ ಚೇತನ್ ಎ.ಸಿ ‘ಕಾಲಾಪತ್ಥರ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚೇತನ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ‘ಕಾಲಾ ಪತ್ಥರ್’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಎಸ್ ಅಂಡ್ ಎಸ್ ಎಂಟರ್‍ಪ್ರೈಸಸ್ ಬ್ಯಾನರಿನಡಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಹೆಚ್.ಪಿ.ನವೀನ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಚಿತ್ರತಂಡ ನಾಯಕಿ ಹಾಗೂ ಕಲಾವಿದರ ಆಯ್ಕೆಯಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದೆ.






 Advertisement 




Sign in to your account
Username or Email Address


Password

 Remember Me


