ಬೀದರ್: ಸಿದ್ದರಾಮಯ್ಯನವರೇ ಮೊದಲು ನಿಮ್ಮ ಮತ್ತು ಡಿಕೆ ಶಿವಕುಮಾರ್‍ರವರ ಸಂಬಂಧ ಸರಿಪಡಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕನ ವಿರುದ್ಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.ಇಂದು ಬೀದರ್‍ನಲ್ಲಿ ನಡೆದ ಜನ ಸೇವಕ ಸಮಾವೇಶದಲ್ಲಿ ಜಗದೀಶ್ ಶೆಟ್ಟರ್ ಪಾಲ್ಗೊಂಡಿದ್ದರು. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಏನು ನಮ್ಮ ಪಾರ್ಟಿ ವಕ್ತಾರರಾ ಅಥವಾ ಹೈಕಮಾಂಡಾ? ಸಿದ್ದರಾಮಯ್ಯನವರೇ ಮೊದಲು ನಿಮ್ಮ ಮತ್ತು ಡಿಕೆ ಶಿವಕುಮಾರ್‍ರವರ ಸಂಬಂಧ ಸರಿಪಡಿಸಿಕೊಳ್ಳಿ. ಅದನ್ನು ಬಿಟ್ಟು ಟೀಕೆ ಮಾಡುವುದನ್ನು ಬಿಡಿ. ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ, ಇನ್ನೂ ಎರಡು ವರ್ಷ ಬಿಎಸ್ ಯಡಿಯೂರಪ್ಪ ನವರೇ ಸಿಎಂ ಆಗಿ ಇರುತ್ತಾರೆ ಎಂದು ಜಗದೀಶ್ ಶೆಟ್ಟರ್ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.ಈ ವೇಳೆ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆ ಮಾಡುವುದು ಸಿಎಂ ಅವರ ಪರಾಮಾಧಿಕಾರ ಎಂದು ತಿಳಿಸಿದರು. ಇಂದು ನಾವು ಬೀದರ್‍ನಲ್ಲಿ ಜನ ಸೇವಕ ಸಮಾವೇಶ ಮಾಡುತ್ತಿದ್ದೇವೆ. ಹೀಗಾಗಿ ಎಚ್ಚರಗೊಂಡ ಕಾಂಗ್ರೆಸ್ ಹುಬ್ಬಳ್ಳಿಯಲ್ಲಿ ಜನ ಸಂಕಲ್ಪ ಕಾರ್ಯಕ್ರಮ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇದೀಗ ಜನರ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿದೆ. ಹೀಗೆ ಮುಂದುವರಿದರೆ ಕಾಂಗ್ರೆಸ್ ಕಥೆ ಅದೋಗತಿಗೆ ಹೋಗುತ್ತದೆ ಎಂದು ಲೇವಡಿ ಮಾಡಿದರು.ಬಸವಕಲ್ಯಾಣ, ಬೆಳಗಾವಿ ಹಾಗೂ ಮಸ್ಕಿ ಚುನಾವಣೆಗೆ ಬಿಜೆಪಿ ಪಕ್ಷ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಭ್ಯರ್ಥಿ ಯಾರು ಎಂದು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು.ಬಿಹಾರ್, ಮಹಾರಾಷ್ಟ್ರ ಚುನಾವಣೆ ಸೇರಿದಂತೆ ಬಹುತೇಕ ಕಡೆ ಕಾಂಗ್ರೆಸ್ ನಾಲ್ಕನೇಯ ಸ್ಥಾನಕ್ಕೆ ಹೋಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೆಸರು ಇಲ್ಲದಂತೆ ಮನೆಗೆ ಹೋಗುತ್ತದೆ. ನಾಯಕರಾಗಲು ಕಾಂಗ್ರೆಸ್ಸಿನಲ್ಲಿ ವೇದಿಕೆಗೆ ಬರುತ್ತಾರೆ. ಆದ್ರೆ ಬಿಜೆಪಿಯಲ್ಲಿ ಯಾರನ್ನು ಕರೆಯುತ್ತೇವೆಯೋ ಅವರು ನಾಯಕರಾಗಲು ಬರುತ್ತಾರೆ. ಇದೀಗ ಕಾಂಗ್ರೆಸ್ಸಿನಲ್ಲಿ ಕಾರ್ಯಕರ್ತರೆ ಇಲ್ಲ, ಎಲ್ಲರೂ ನಾಯಕರೇ ಆಗಿದ್ದಾರೆ ಎಂದರು.ಬಸವಕಲ್ಯಾಣದಲ್ಲಿ ಸಿಎಂ ಬಿಎಸ್‍ವೈ ಅನುಭವ ಮಂಟಪ ಅಡಿಗಲ್ಲು ಹಾಕಿದ್ದಾರೆ ಎಂದು ಹೇಳುತ್ತಾ ಈ ಬಾರಿ ಗ್ರಾಮ ಪಂಚಾಯತಿಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.Sign in to your account
Username or Email Address


Password

 Remember Me


