ಶಿವಮೊಗ್ಗ: ಕ್ವಾರಂಟೈನ್ ನಲ್ಲಿದ್ದ ವೈದ್ಯರಿಗೆ ಮನೆಯನ್ನು ಖಾಲಿ ಮಾಡುವಂತೆ ಮಾಲೀಕ ಒತ್ತಡ ಹೇರಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಕಾರಣಕ್ಕೆ ಖಾಸಗಿ ವೈದ್ಯರೊಬ್ಬರು ಸ್ವಯಂ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರು. ಕಳೆದ ಎರಡು ದಿನದ ಹಿಂದೆ ತೀರ್ಥಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಪಾಸಿಟಿವ್ ದೃಢವಾಗುವ ಎರಡು ದಿನದ ಹಿಂದೆ ಖಾಸಗಿ ವೈದ್ಯರೊಬ್ಬರ ಬಳಿ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು.ಇತ್ತ ಚಿಕಿತ್ಸೆ ನೀಡಿದ್ದ ವ್ಯಕ್ತಿಗೆ ಪಾಸಿಟಿವ್ ಪತ್ತೆಯಾದ ಕಾರಣಕ್ಕೆ ವೈದ್ಯ ಹಾಗೂ ಲ್ಯಾಬ್ ಟೆಕ್ನೀಷಿಯನ್ ಇಬ್ಬರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಖಾಸಗಿ ವೈದ್ಯರ ಮನೆಯಲ್ಲಿ ಚಿಕ್ಕ ಮಗು ಹಾಗೂ ವಯಸ್ಸಾದವರು ಇದ್ದಾರೆ. ಹೀಗಾಗಿ ವೈದ್ಯ ಲ್ಯಾಬ್ ಟೆಕ್ನೀಷಿಯನ್ ಬಾಡಿಗೆಗೆ ಇದ್ದ ಮನೆಯಲ್ಲಿಯೇ ಇಬ್ಬರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮನೆಯ ಮಾಲೀಕ ನೀವು ನಮ್ಮ ಮನೆಯಲ್ಲಿ ಇರಬೇಡಿ. ಬೇರೆ ಎಲ್ಲಾದರೂ ಹೋಗಿ ಎಂದು ಒತ್ತಡ ಹಾಕಿದ್ದಾರೆ ಎಂದು ವೈದ್ಯ ಆರೋಪಿಸಿದ್ದಾರೆ.ಇದನ್ನೇ ಅವಮಾನ ಎಂದು ಭಾವಿಸಿದ ವೈದ್ಯ ಹಾಗೂ ಲ್ಯಾಬ್ ಟೆಕ್ನೀಷಿಯನ್ ತಹಶೀಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಖಾಸಗಿ ವೈದ್ಯ ಈ ಬಗ್ಗೆ ವೈದ್ಯಕೀಯ ಸಂಘಕ್ಕೆ ಕೂಡ ದೂರು ಸಲ್ಲಿಸಿದ್ದಾರೆ. ಖಾಸಗಿ ವೈದ್ಯರಿಗೂ ಮನೆ ಮಾಲೀಕರಿಗೂ ಸಂಬಂಧ ಇಲ್ಲ. ಮನೆಯನ್ನು ಬಾಡಿಗೆ ಪಡೆದಿದ್ದು ಲ್ಯಾಬ್ ಟೆಕ್ನೀಷಿಯನ್. ಆದರೆ ತನ್ನ ಮನೆಯಲ್ಲಿ ಸಣ್ಣ ಮಗು ವಯಸ್ಸಾದವರು ಇದ್ದಾರೆ ಎನ್ನುವ ಕಾರಣಕ್ಕೆ ಸ್ನೇಹಿತ ಬಾಡಿಗೆ ಪಡೆದಿದ್ದ ಮನೆಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದದ್ದು ಎಷ್ಟು ಸರಿ. ಮನೆಯ ಮಾಲೀಕರಿಗೆ ಆತಂಕ ಆಗುವುದಿಲ್ಲವೇ. ಈ ಬಗ್ಗೆ ತಾಲೂಕು ಆಡಳಿತಕ್ಕೆ ತಿಳಿಸಿದ್ದರೆ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತಿತ್ತು.ನಂತರ ತಹಶೀಲ್ದಾರ್ ಅವರು ಖಾಸಗಿ ವೈದ್ಯ ಹಾಗೂ ಮನೆ ಮಾಲೀಕರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ಅಲ್ಲದೇ ಖಾಸಗಿ ವೈದ್ಯ ಮತ್ತು ಲ್ಯಾಬ್ ಟೆಕ್ನೀಷಿಯನ್ ಗೆ ಬೇರೆಡೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿದ್ದಾರೆ.






 Advertisement 




Sign in to your account
Username or Email Address


Password

 Remember Me


