ಶಿವಮೊಗ್ಗ: ಬಿಜೆಪಿ ಶಾಸಕರಲ್ಲೇ ಅಸಮಾಧಾನವಿದ್ದು, ಇದು ಇನ್ನು ಕೆಲವೇ ದಿನಗಳಲ್ಲಿ ಸ್ಫೋಟವಾಗಲಿದೆ. ಈಗಾಗಿ ರಾಜ್ಯ ರಾಜಕಾರಣದಲ್ಲಿ ಇನ್ನು 6 ತಿಂಗಳಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು ಕೊರೊನಾ ಎಂಬ ಕಾರಣಕ್ಕೆ ಹಾಗೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಮುಗಿಯಲಿ ಅಂತಾ ಸುಮ್ಮನಿದ್ದಾರೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಬಿಜೆಪಿ ಶಾಸಕರ ಅಸಮಾಧಾನ ಸ್ಫೋಟಗೊಳ್ಳುತಿತ್ತು ಎಂದರು. ಮಾಜಿ ಸಚಿವ ವಿಶ್ವನಾಥ್ ಅವರಿಗೆ ಪರಿಷತ್ ಟಿಕೆಟ್ ಕೈತಪ್ಪಿದ್ದಕ್ಕೆ ಆ ವ್ಯಕ್ತಿಗೆ ಬಿಜೆಪಿಯವರು ಸರಿಯಾಗಿ ಪಾಠ ಕಲಿಸಿದ್ದಾರೆ. ನಿಜವಾಗಿಯೂ ವಿಶ್ವನಾಥ್ ಹಳ್ಳಿಹಕ್ಕಿ ಅಲ್ಲ. ಆತನಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ಹರಿಹಾಯ್ದರು.ರಾಜಕಾರಣದಲ್ಲಿ ವಿಶ್ವನಾಥ್ ಎಲ್ಲಾ ಕಳೆದುಕೊಂಡಿದ್ದ. ಆತನಿಗೆ ರಾಜಕೀಯ ಭವಿಷ್ಯವೇ ಇರಲಿಲ್ಲ. ಅಂತಹ ವ್ಯಕ್ತಿಯನ್ನು ಜೆಡಿಎಸ್ ವರಿಷ್ಠರು ಟಿಕೆಟ್ ಕೊಟ್ಟು ಗೆಲ್ಲಿಸಿದರು. ಆದರೆ ಕೃತಜ್ಞತೆ ಇಲ್ಲದ ವ್ಯಕ್ತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಒಂದು ಅಂತೂ ಸತ್ಯ. ಯಡಿಯೂರಪ್ಪ ಅವರನ್ನು ನಾವು ಖಂಡಿತ ಇಳಿಸಲು ಹೋಗುವುದಿಲ್ಲ. ಅವರ ಪಕ್ಷದವರೇ ಇಳಿಸಲಿದ್ದಾರೆ ಕಾದು ನೋಡಿ. ಬಿಎಸ್‍ವೈ ಅವರ ಮಾನಸ ಪುತ್ರರೇ ಇನ್ನು ಸ್ವಲ್ಪ ದಿನದಲ್ಲಿ ಅವರ ವಿರುದ್ಧ ಎದ್ದು ನಿಲ್ಲಲಿದ್ದಾರೆ ಎಂದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನು 6 ತಿಂಗಳ ನಂತರ ಖಂಡಿತ ಸಿಎಂ ಕುರ್ಚಿಯಲ್ಲಿ ಕೂರುವ ಪರಿಸ್ಥಿತಿ ಇಲ್ಲ. ಅದು ಬಿಎಸ್‍ವೈ ಅವರಿಗೆ ಮುಳ್ಳಿನ ಖುರ್ಚಿ ಆಗಿದೆ. ಆಗಂತಾ ಭವಿಷ್ಯ ಹೇಳುವುದಕ್ಕೆ ನಾನು ಕೋಡಿಮಠದ ಸ್ವಾಮೀಜಿ ಅಲ್ಲ. ಅವರು ಇಷ್ಟೊತ್ತಿಗೆ ಈ ಬಗ್ಗೆ ಭವಿಷ್ಯ ಹೇಳಬೇಕಿತ್ತು. ಆದರೆ ಅವರಿಗೂ ಯಾಕೋ ಈ ಬಗ್ಗೆ ಹೇಳುವುದಕ್ಕೆ ಆಸಕ್ತಿ ಇಲ್ಲ ಅಂತಾ ಕಾಣುತ್ತೆ ಎಂದು ಹೇಳಿದರು.ಬಹಳಷ್ಟು ಮಂದಿ ಶಾಸಕರು ಅಸಮಾಧಾನ ಹೊಂದಿದ್ದು, ಆ ಅಸಮಾಧಾನವನ್ನು ತಮ್ಮ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಆ ಅಸಮಾಧಾನ ಯಾವಾಗ ಹೊರಗೆ ಬರುತ್ತೋ ಗೊತ್ತಿಲ್ಲ. ಆದರೆ ರಾಜಕೀಯದಲ್ಲಿ ಬದಲಾವಣೆ ಆಗುವ ಸೂಚನೆಯಂತೂ ಕಾಣುತ್ತಿದ್ದೇವೆ. ಬಿಜೆಪಿಯಲ್ಲಿ ಸಹ ಈಗಾಗಲೇ ಮೂರು ಮಂದಿ ಸಿಎಂ ರೇಸ್ ನಲ್ಲಿದ್ದು, ಈಗಾಗಲೇ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎಂದು ತಿಳಿಸಿದರು.ಸಿಎಂ ಯಡಿಯೂರಪ್ಪ ಅವರು ನೆಪ ಮಾತ್ರಕ್ಕೆ ಸಿಎಂ. ಅವರ ಕೈಯಲ್ಲಿ ಆಡಳಿತ ಇಲ್ಲ. ಸಿಎಂ ಅವರ ಎಲ್ಲಾ ಆಡಳಿತ ನಡೆಸುತ್ತಿರುವುದು ಅವರ ಪುತ್ರ ವಿಜಯೇಂದ್ರ ಹಾಗೂ ಸಂಸದೆ ಶೋಭ ಕರಂದ್ಲಾಜೆ. ಸಿಎಂ ಅವರ ಸಂಪೂರ್ಣ ಅಧಿಕಾರ ಇವರಿಬ್ಬರ ಕೈಯಲ್ಲಿದೆ. ಹೀಗಾಗಿಯೇ ವಿಜಯೇಂದ್ರ ಉಪ್ಪಾರಪೇಟೆ ಠಾಣೆ ಇನ್ಸ್‍ಪೆಕ್ಟರ್ ಒಬ್ಬರ ವರ್ಗಾವಣೆಗೆ 50 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಬೇಳೂರು ಗಂಭೀರ ಆರೋಪ ಮಾಡಿದರು.Sign in to your account
Username or Email Address


Password

 Remember Me


