ಹಾಸನ: ಪ್ರತಿ ಕ್ವಿಂಟಾಲ್‍ಗೆ 10,300 ರೂ. ನಂತೆ ಬೆಂಬಲ ಬೆಲೆಯೊಂದಿಗೆ ಕೊಬ್ಬರಿ ಖರೀದಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೂ.11ರ ಸರ್ಕಾರಿ ಆದೇಶದಂತೆ ಕೊಬ್ಬರಿಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತರಬೇಕಿದೆ. ಕೇಂದ್ರ ಸರ್ಕಾರ ಬೆಂಬಲಬೆಲೆಯೊಂದಿಗೆ ಕೊಬ್ಬರಿ ಖರೀದಿಸಲು ನೆಫೆಡ್ ಸಂಸ್ಥೆಯನ್ನು ಗುರುತಿಸಿದ್ದು, ರಾಜ್ಯ ಸರ್ಕಾರ ಸಹಕಾರ ಮಾರಾಟ ಮಂಡಳಿ ಮೂಲಕ ಖರೀದಿಸಲು ಸೂಚನೆ ನೀಡಿದೆ. ಅದರಂತೆ ನಾಳೆಯಿಂದ ಮುಂದಿನ 15 ದಿನಗಳ ಕಾಲ ರೈತರ ನೋಂದಣಿ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ಅರಸೀಕೆರೆ ಹಾಗೂ ಚನ್ನರಾಯಪಟ್ಟಣಗಳಲ್ಲಿ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಎಕರೆಗೆ 6 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ಕೊಬ್ಬರಿ ಖರೀದಿಸಲು ಅವಕಾಶವಿದೆ. ಒಂದು ವೇಳೆ ಫ್ರೂಟ್ಸ್(ರೈತರ ನೊಂದಣಿ ಹಾಗೂ ಫಲಾನುಭವಿಗಳ ಕೇಂದ್ರಿಕೃತ ಮಾಹಿತಿ ವ್ಯವಸ್ಥೆ) ಐ.ಡಿ. ಇಲ್ಲದವರು ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿ ಪಡೆಯಬಹುದಾಗಿದೆ. ಇದರಲ್ಲಿ ಆಧಾರ್ ಸಂಖ್ಯೆಯೊಂದಿಗೆ ಜೋಡಿಸಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಶ್ರೀಹರಿ ಅರಸೀಕೆರೆ, ಬೇಲೂರು ಹಾಗೂ ಹಾಸನ ತಾಲ್ಲೂಕುಗಳ ರೈತರು ಅರಸೀಕೆರೆ ಎಪಿಎಂಸಿಯ ಖರೀದಿ ಕೇಂದ್ರದಲ್ಲಿ ಮತ್ತು ಚನ್ನರಾಯಪಟ್ಟಣದಲ್ಲಿ ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ, ಆಲೂರು ತಾಲೂಕುಗಳ ರೈತರು ಚನ್ನರಾಯಪಟ್ಟಣ ಎಪಿಎಂಸಿಯ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.ಜಂಟಿ ಕೃಷಿ ನಿರ್ದೇಶಕ ಡಾ.ಮಧುಸೂದನ್, ತೋಟಗಾರಿಕಾ ಉಪನಿರ್ದೇಶಕ ಮಂಜುನಾಥ್ ಕೊಬ್ಬರಿ ಖರೀದಿ ವ್ಯವಸ್ಥೆ ನೋಂದಣಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ, ಗುರುತಿನ ಚೀಟಿ ಹಾಗೂ ಹೊಸ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಕುರಿತು ವಿವರಿಸಿದರು.Sign in to your account
Username or Email Address


Password

 Remember Me


