ಮಡಿಕೇರಿ: ಜೂನ್, ಜುಲೈ ತಿಂಗಳು ಅಂದರೆ ಕರ್ನಾಟಕದ ಕಾಶ್ಮೀರ ತುಂಬಿ ತುಳುಕುತಿತ್ತು. ಆದರೆ ಕೊರೊನಾ ಮಹಾಮಾರಿಯ ಭಯ ವೀಕ್ ಎಂಡ್ ನಲ್ಲೂ ಮಂಜಿನನಗರಿಯಲ್ಲಿ ಎಲ್ಲವೂ ಖಾಲಿ ಖಾಲಿ ಎನ್ನುವಂತೆ ಮಾಡಿದೆ.ಲಾಕ್‍ಡೌನ್ ಸಡಿಲಿಕೆ ಮಾಡಿದ್ರೆ ಸಾಕು ಎನ್ನುತ್ತಿದ್ದ ವ್ಯಾಪಾರಿಗಳು ಗ್ರಾಹಕರಿಲ್ಲದೆ ಪರದಾಡುತ್ತಿದ್ದಾರೆ. ಅಪಾರ ಸಂಪತ್ತಿನಿಂದಲೇ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಕೊಡಗು ಪ್ರವಾಸಿ ತಾಣಗಳ ಜಿಲ್ಲೆಯೆಂದೇ ಖ್ಯಾತಿ. ಇಲ್ಲಿನ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿರುವುದೇ ಪ್ರವಾಸೋದ್ಯಮ. ಇದನ್ನು ನಂಬಿಕೊಂಡೇ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಕೊರೊನಾ ಮಹಾಮಾರಿಯಿಂದ ದೇಶವೇ ಲಾಕ್ ಡೌನ್ ಆದ ಬಳಿಕ ಎಲ್ಲವೂ ಸ್ಥಗಿತವಾಗಿ ಹೋಗಿತ್ತು.ಈಗ ಲಾಕ್‍ಡೌನ್ ಬಹುತೇಕ ಸಡಿಲಿಕೆ ಆಗಿದ್ದರೂ, ಮಂಜಿನ ನಗರಿ ಮಾತ್ರ ಖಾಲಿ ಖಾಲಿ ಹೊಡೆಯುತ್ತಿದೆ. ಜೂನ್, ಜುಲೈ ತಿಂಗಳೆಂದರೆ ಕೊಡಗು ಜಿಲ್ಲೆ ಪ್ರವಾಸಿಗರಿಂದ ತುಂಬಿ ತುಳುಕುತಿತ್ತು. ಅದರಲ್ಲೂ ವೀಕ್‍ಎಂಡ್ ಬಂತೆಂದರೆ ಹೋಮ್ ಸ್ಟೇ, ರೆಸಾರ್ಟ್ ಮತ್ತು ಹೊಟೇಲ್‍ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಆದರೆ ಇದೀಗ ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ ಪ್ರವಾಸಿಗರು ಕೊಡಗಿನತ್ತ ಮುಖ ಮಾಡಿಲ್ಲ. ರೆಸಾರ್ಟ್, ಹೋಮ್ ಸ್ಟೇ ಮತ್ತು ಹೊಟೇಲ್ ಗಳ ಮಾಲೀಕರು ಸರ್ಕಾರದ ಎಲ್ಲ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರವಾಸಿಗರಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರವಾಸಿಗರು ಕೊಡಗಿನತ್ತ ಮುಖ ಮಾಡುವುದಿರಲಿ ಕನಿಷ್ಠ ಪಕ್ಷ ಹೊಮ್ ಸ್ಟೇ, ರೆಸಾರ್ಟ್‍ಗಳಿಗೆ ಕರೆ ಮಾಡಿ ವಿಚಾರಣೆ ಕೂಡ ಮಾಡುತ್ತಿಲ್ಲ ಎನ್ನುವುದು ಕೊಡಗಿನ ಹೋಮ್ ಸ್ಟೇ, ರೆಸಾರ್ಟ್‍ಗಳ ಮಾಲೀಕರನ್ನು ಆತಂಕಕ್ಕೆ ದೂಡಿದೆ.ಪ್ರವಾಸೋದ್ಯಮದಿಂದ ಕೇವಲ ಹೋಮ್ ಸ್ಟೇ, ಹೊಟೇಲ್ ಮತ್ತು ರೆಸಾರ್ಟ್‍ಗಳು ಅಷ್ಟೇ ಅಲ್ಲ ಸ್ಪೈಸಿಸ್ ಅಂಗಡಿಗಳು, ಕೊಡಗಿನ ವೈನ್ ಎಲ್ಲವೂ ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಆದರೆ ಪ್ರವಾಸಿಗರಿಲ್ಲದೇ ಇರುವುದರಿಂದ ಇದೀಗ ಈ ಸ್ಪೈಸೀಸ್ ಅಂಗಡಿಗಳು ಗ್ರಾಹಕರಿಲ್ಲದೆ ಬಣಗುಡುತ್ತಿವೆ. ಅಷ್ಟೇ ಅಲ್ಲ ಮಂಜಿನ ನಗರಿ ಮಡಿಕೇರಿಯಲ್ಲೇ ವಾರದ ಕೊನೆ ದಿನಗಳಲ್ಲೂ ಜನರು, ವಾಹನಗಳ ಓಡಾಟವಿಲ್ಲದೆ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಲಾಕ್‍ಡೌನ್ ಸಡಿಲವಾದರೆ ಸಾಕು ಪ್ರವಾಸಿಗರು ಕೊಡಗಿನತ್ತ ಮುಖ ಮಾಡುತ್ತಾರೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸಬಹುದು ಎಂದುಕೊಂಡಿದ್ದ ಕೊಡಗಿನ ವ್ಯಾಪಾರಸ್ಥರಿಗೆ ತೀವ್ರ ನಿರಾಸೆ ಮೂಡಿಸಿದೆ.ಮತ್ತೊಂದೆಡೆ ಇಂದಿಗೂ ಕೊಡಗಿನ ಹಲವು ಪ್ರವಾಸಿತಾಣಗಳು ಬಂದ್ ಆಗಿದ್ದು, ನೋಡುಗರಿಗೆ ಮುಕ್ತವಾಗಿಲ್ಲ. ಹೀಗಾಗಿ ಪ್ರವಾಸೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಕಂಗಾಲಾಗುವಂತೆ ಮಾಡಿದೆ ಎನ್ನುವುದು ವ್ಯಾಪಾರಸ್ಥರ ಅಳಲು.Sign in to your account
Username or Email Address


Password

 Remember Me


