ಬೆಳಗಾವಿ: ದೇಶದಲ್ಲಿ ಕೊರೊನಾ ಮಹಾಮಾರಿ ಕದಂಬಬಾಹು ಚಾಚುತ್ತಾ ರಣಕೇಕೆ ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರ, ಶಂಕಿತರ ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಿ ಎಡವಟ್ಟು ಮಾಡುತ್ತಿದ್ದು, ಇದೀಗ ಮತ್ತೊಂದು ಎಡವಟ್ಟು ಮಾಡಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಸೋಂಕಿತರು ಗುಣಮುಖರಾಗಲು ಅದಮ್ಯ ಸೇವೆ ಸಲ್ಲಿಸುತ್ತಿರುವ ಕೊರೋನಾ ವಾರಿಯರ್ಸ್‍ಗೆ ಸರ್ಕಾರ ಆಘಾತ ನೀಡಿದೆ.ಕೋವಿಡ್ ವಾರ್ಡಿನಲ್ಲಿ ಹಾಗೂ ಕೋವಿಡ್ ಟೆಸ್ಟಿಂಗ್ ಲ್ಯಾಬ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರ್ಕಾರ ಲಾಡ್ಜ್‍ಗಳಲ್ಲಿ ಇರಲು ವ್ಯವಸ್ಥೆ ಮಾಡಿತ್ತು. ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ 7 ದಿನ ಕೆಲಸ ಮಾಡಿದ ಬಳಿಕ 14 ದಿನಗಳ ಕಾಲ ಹೋಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿರಬೇಕು ಅಂತ ನಿಯಮ ಕೂಡ ರೂಪಿಸಿತ್ತು. ಆದರೆ ಇದೀಗ ವೈದ್ಯಕೀಯ ಸಿಬ್ಬಂದಿ ಲಾಡ್ಜ್ ತೊರೆಯುವಂತೆ ಸೂಚಿಸಿ, ಮನೆಯಿಂದಲೇ ಕೆಲಸಕ್ಕೆ ಬರುವಂತೆ ಸೂಚಿಸಿದೆ. ಕೆಲ ಸಿಬ್ಬಂದಿ ಮನೆ ಚಿಕ್ಕದಿರುತ್ತೆ, ಪ್ರತ್ಯೇಕ ರೂಮಿನಲ್ಲಿ ಐಸೊಲೇಷನ್ ಇರಲಾಗಲ್ಲ. ಕೆಲವರ ಮನೆಯಲ್ಲಿ ಮಕ್ಕಳು, ವಯೋವೃದ್ಧರು ಇರ್ತಾರೆ ಅವರ ಪರಿಸ್ಥಿತಿ ಏನು ಅಂತ ಕೋವಿಡ್ ವಾರ್ಡ್ ವೈದ್ಯಕೀಯ ಸಿಬ್ಬಂದಿ, ಕುಟುಂಬಸ್ಥರು ಚಿಂತಿಸುತ್ತಿದ್ದಾರೆ.ಬೆಳಗಾವಿಯ ಐಸಿಎಂಆರ್‍ನಲ್ಲಿರುವ ಕೋವಿಡ್ ಟೆಸ್ಟ್ ಲ್ಯಾಬ್‍ನಲ್ಲಿ ಕೆಲಸ ಮಾಡುವ 10 ಸಿಬ್ಬಂದಿಗೂ ಲಾಡ್ಜ್ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಬೇರೆ ಊರುಗಳಿಂದ ಬರುವವರಿಗೆ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸ್ಥಳೀಯರಿಗೆ ಮನೆಯಿಂದಲೇ ಬರಲು ತಿಳಿಸಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಡಿಹೆಚ್‍ಒ ಡಾ.ಎಸ್.ವಿ ಮುನ್ಯಾಳ್, ಮೊದಲು ಸೋಂಕಿನ ಪ್ರಮಾಣ ಜಾಸ್ತಿ ಇತ್ತು. ಹೀಗಾಗಿ ಕೋವಿಡ್ ವಾರ್ಡಿನಲ್ಲಿ, ಕೋವಿಡ್ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 7 ದಿನಗಳ ಕೆಲಸ ಬಳಿಕ ಕ್ವಾರಂಟೈನ್‍ನಲ್ಲಿ ಇಡಲಾಗುತ್ತಿತ್ತು. ರಾಜ್ಯಮಟ್ಟದಿಂದ ಬಂದ ನಿರ್ದೇಶನದಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.ಒಟ್ಟಿನಲ್ಲಿ ಹೊರರಾಜ್ಯದಿಂದ ಬಂದವರು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾಗ ವರದಿ ಬರುವ ಮುನ್ನವೇ ಅವರನ್ನು ಬಿಡುಗಡೆ ಮಾಡಿ ಅವರ ಮನೆಯವರಿಗೆ ಆತಂಕಕ್ಕೀಡುವಂತೆ ಮಾಡಿದ್ದು ಒಂದೆಡೆಯಾದರೆ, ಹೈರಿಸ್ಕ್‍ನಲ್ಲಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ಆದರೆ ಇದರ ವಿರುದ್ಧ ಧ್ವನಿ ಎತ್ತಿದ್ರೆ ಎಲ್ಲಿ ಕೆಲಸಕ್ಕೆ ಕುತ್ತು ಬರುತ್ತೋ ಅಂತ ಮಾತನಾಡುತ್ತಿಲ್ಲವೇನೋ ಗೊತ್ತಿಲ್ಲ. ಸರ್ಕಾರ ಕೈಗೊಳ್ಳುವ ನಿರ್ಧಾರದಿಂದ ಕೊರೊನಾ ವಾರಿಯರ್ಸ್ ಕುಟುಂಬಕ್ಕೆ ತೊಂದರೆಯಾಗದಿರಲಿ ಎಂಬುದೇ ಸಾರ್ವಜನಿಕರ ಆಶಯವಾಗಿದೆ.Sign in to your account
Username or Email Address


Password

 Remember Me


