ಬೆಂಗಳೂರು: ಕೊರೊನಾ ಮಧ್ಯೆ ಸ್ಯಾಂಡಲ್‍ವುಡ್‍ಗೆ ಬರಸಿಡಿಲು ಬಡಿದಿದೆ. ತನ್ನ ನಗು, ಸ್ಪೆಷಲ್ ಮ್ಯಾನರಿಸಂನಿಂದ ಯುವಸಾಮ್ರಾಟ್ ಅನಿಸಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿದ್ದಾರೆ.sಶನಿವಾರ ರಾತ್ರಿಯೇ ಚಿರುಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ ಕೂಡ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಜಯನಗರದ ಖಾಸಗಿ ಆಸ್ಪತ್ರೆ (ಸಾಗರ್ ಅಪೋಲೋ)ಗೆ ದಾಖಲಿಸಿದಾಗ ಅಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ. ನಾಳೆ ತುಮಕೂರಿನ ಮಧುಗಿರಿಯಲ್ಲಿ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನೆರವೇರಲಿದೆ.ಜಯನಗರದ ಆಸ್ಪತ್ರೆಯಿಂದ ಬಸವನಗುಡಿಯ ಚಿರು ನಿವಾಸಕ್ಕೆ ಪಾರ್ಥಿವ ಶರೀರವನ್ನು 8.15ರ ಹೊತ್ತಿಗೆ ಶಿಫ್ಟ್ ಮಾಡಲಾಯಿತು. ಈಗ ಬಸವನಗುಡಿಯ ನಿವಾಸದ ಬಳಿ ಇಡಲಾಗಿದೆ. ಚಿರಂಜೀವಿ ಸರ್ಜಾ ಸೋದರ ಮಾವ ಅರ್ಜುನ್ ಸರ್ಜಾ ಚೆನ್ನೈನಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ.ಆಸ್ಪತ್ರೆ ಕೂಡ ವರದಿ ರಿಲೀಸ್ ಮಾಡಿದ್ದು, ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಮಧ್ಯಾಹ್ನ 2.20ಕ್ಕೆ ಆಸ್ಪತ್ರೆಗೆ ಕರೆಯಲಾಯಿತು. ತಕ್ಷಣವೇ ಎಮರ್ಜೆನ್ಸಿ ವಾರ್ಡ್‍ಗೆ ಶಿಫ್ಟ್ ಮಾಡಿ, ದೇಹದ ಉಷ್ಣಾಂಶ, ನಾಡಿಮಿಡಿತ, ಕಣ್ಣಿನ ತಪಾಸಣೆ ಮಾಡಿದಾಗ ಸ್ಪಂದನೆ ಇರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನ ಉಪಕರಣ ಬಳಸಿ ಎದೆಯೊತ್ತಿ ಉಸಿರು ನೀಡುವ ಸಿಪಿಆರ್(Cardiopulmonary Resuscitation) ಚಿಕಿತ್ಸೆ ಆರಂಭಿಸಲಾಯಿತು. 3.48ರವರೆಗೆ ಈ ಪ್ರಕ್ರಿಯೆ ನಡೆಯಿತು. ಮೂರು ಬಾರಿ ಸಿಪಿಆರ್ ಚಿಕಿತ್ಸೆಯಲ್ಲಿ ಯಶಸ್ವಿಯಾದರೂ ಬಳಿಕ ಸ್ಪಂದನೆ ಸಿಗಲಿಲ್ಲ. ಹಾಗಾಗಿ, 3.48ಕ್ಕೆ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂಬುದಾಗಿ ಪ್ರಕಟಿಸಲಾಯಿತು ಅಂತ ಅಪೋಲೋ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದ ಚಿರುಗೆ ಕೇವಲ 39 ವರ್ಷವಾಗಿತ್ತು. ಹಠಾತ್ ಆಗಿ ಇಷ್ಟು ಚಿಕ್ಕ ವಯಸ್ಸಿಗೇ ನಿಧನರಾಗಿರೋದು ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ರು. ಅಯ್ಯೋ.. ಇದೊಂದು ಅನ್ಯಾಯದ ಸಾವು, ಕ್ರೂರ ವಿಧಿಯಾಟ ಅಂತ ಹೃದಯ ಕಿತ್ತುಬರುವಂತೆ ಭಾವುಕರಾಗಿದ್ದಾರೆ. ಅದರಲ್ಲೂ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಮೇಘನಾ ಇದೀಗ ಗರ್ಭಿಣಿಯಾಗಿದ್ದು ಎಲ್ಲರೂ ಮರುಕಪಟ್ಟಿದ್ದಾರೆ.Sign in to your account
Username or Email Address


Password

 Remember Me


