ತುಮಕೂರು: ಹೆಣ್ಣು ಅಂತ ಆಗಲಿ ಅಥವಾ ರೈತ ಸಂಘದವರು ಎಂದು ಗುರುತಿಸಿ ಮಾತನಾಡಿಲ್ಲ. ವ್ಯಯಕ್ತಿಕವಾಗಿ ಮಿತಿ ಮೀರಿ ಮಾತನಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದೆ. ನನ್ನ ಮಾತಿನಿಂದ ಹೆಣ್ಮಕ್ಕಳ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.ಮಾಧ್ಯಮಗಳ ಜೊತೆ ಮಾತನಾಡಿದ ಮಾಧುಸ್ವಾಮಿ, ಆ ಭಾಗಕ್ಕೆ ನೀರು ಸಿಗುತ್ತಿಲ್ಲ ಎನ್ನೋ ಕಾರಣಕ್ಕೆ ಅಲ್ಲಿಗೆ ಹೋಗಿದ್ವಿ. ಆಗ ಮಹಿಳೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಕಾರ್ಯದರ್ಶಿಯವರು ನೋಡಮ್ಮ ಇದು ನಮ್ಮ ಜವಾಬ್ದಾರಿ ಬಿಟ್ಟು ಬಿಡಮ್ಮ ಎಂದು ಹೇಳಿದ್ದರು. ಆದರೆ ಆಕೆ ತಕ್ಷಣ ನನ್ನ 130 ಎಕರೆ ಒತ್ತುವರಿಯಾಗಿದೆ. ನೀವು ಏನ್ರಿ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೇಳಿದರು. ನಾನು ಮಂತ್ರಿ ಆಗಿದ್ದು ಈಗ ನನ್ನ ಪ್ರಶ್ನೆ ಕೇಳುತ್ತಿದ್ದಿಯಾ ಎಂದು ಹೇಳಿದ್ದು ನಿಜ. ಆದರೆ ಆಕೆ ಇಷ್ಟು ದಿನದ ತನಕ ಏನ್ರಿ ಮಾಡುತ್ತಿದ್ದೀರಿ ಅಂತ ನನ್ನನ್ನೇ ಕೇಳಿದರು ಎಂದರು.ನನಗೂ ಸ್ವಾಭಿಮಾನವಿದೆ. ಆದೇಶ ಕೊಡಲಿಕ್ಕೆ ಬರಬೇಡ ಮನವಿ ಮಾಡಿ ಎಂದು ಹೇಳಿದೆ. ಆದರೂ ಆಕೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಆಗ ಬಾಯಿ ಮುಚ್ಚಮ್ಮ ಎಂದು ಹೇಳಿದೆ. ಮಂತ್ರಿ ಆಗಿ ಆ ಊರಿಗೆ ಹೋಗಿ ಬಾಯಿಗೆ ಬಂದಾಗೆ ಬೈಯಿಸಿಕೊಳ್ಳಲಿಕ್ಕೆ ಹೋಗಿದ್ವಾ? ಅಷ್ಟೊರಳಗೆ ಪೊಲೀಸರು ಬಂದು, ಸರ್ ಯಾರೇ ಬಂದರೂ ಈಕೆ ಹೀಗೆ ಮಾತನಾಡುವುದು ಎಂದರು. ಅಲ್ಲಿಗೆ ಯಾವ ಅಧಿಕಾರಿ ಹೋದರೂ ಆಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಆಯಮ್ಮ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ. ಈ ಗಲಾಟೆ ನಡೆಯಬಾರದಿತ್ತು. ನನಗೆ ಬಹಳ ಬೇಸರವಾಯಿತು ಎಂದರು.ಸಿದ್ದರಾಮಯ್ಯ ಹೇಳಿದಾಗೆ ನಾನು ರಾಜೀನಾಮೆ ಕೊಡಲು ಅವರು ನನ್ನನ್ನು ಮಂತ್ರಿ ಮಾಡಿಲ್ಲ. ನನ್ನನ್ನ ಯಾರೂ ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ. ನಾನು ರಾಜೀನಾಮೆ ಕೊಡುವ ಸ್ಥಿತಿ ನಿರ್ಮಾಣ ಆಗಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿ ಅಂತ ಸಿದ್ದರಾಮಯ್ಯಗೆ ಮಾಧುಸ್ವಾಮಿ ಟಾಂಗ್ ಕೊಟ್ಟರು.ನಾನು ಒಬ್ಬ ಮನುಷ್ಯ, ನನಗೂ ಸ್ವಾಭಿಮಾನ ಇದೆ. ನನ್ನ ನಾಯಕರು ಕರೆದು ರಾಜೀನಾಮೆ ಕೇಳಿದರೆ ಒಂದು ಕ್ಷಣವೂ ಸುಮ್ಮನಿರೋದಿಲ್ಲ. ಹೆಣ್ಣು ಮಕ್ಕಳ ಮನಸ್ಸಿಗೆ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಆಕೆ ಹೆಣ್ಣು ಅಂತ ಆಗಲಿ ಅಥವಾ ರೈತ ಸಂಘದವರು ಎಂದು ಗುರುತಿಸಿ ಮಾತನಾಡಿಲ್ಲ. ವ್ಯಯಕ್ತಿಕವಾಗಿ ಮಿತಿ ಮೀರಿ ಮಾತನಾಡಿದ್ದಕ್ಕೆ ನಾನು ಪ್ರತಿಕ್ರಿಯಿಸಿದೆ. ನಾನು ಕೆಟ್ಟ ಪದ ಎಂದು ಹೇಳಿಲ್ಲ. ನೋವಾಗಿದ್ದರೆ ಕ್ಷಮೆ ಕೇಳುತ್ತೀನಿ ಎಂದು ಮಾಧುಸ್ವಾಮಿ ಹೇಳಿದರು.ಸಚಿವ ಮಾಧುಸ್ವಾಮಿ ಹೇಳಿದ್ದೇನು? 
ಸಚಿವ ಮಾಧುಸ್ವಾಮಿ ಅವರು ರೈತ ಸಂಘದ ಕಾರ್ಯಕರ್ತರಿಗೆ ‘ಏಯ್ ಮುಚ್ಚು.. ಬಾಯಿ ರಾ?’ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದರು. ಕೆ.ಸಿ.ವ್ಯಾಲಿ ಸಂಬಂಧ ಕೆರೆಗಳ ವೀಕ್ಷಣೆಗೆ ಕೋಲಾರ ತಾಲೂಕಿನ ಎಸ್.ಅಗ್ರಹಾರ ಕರೆ ಬಳಿ ತೆರಳಿದ್ದರು. ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿಯವರು ಅವಾಚ್ಯ ಪದ ಬಳಕೆ ಮಾಡಿದ್ದರು. ಕೋಪಗೊಂಡ ಕಾರ್ಯಕರ್ತೆ “ಅದೇನ್ ಅಣ್ಣ ನೀವು ಹಿಂಗ ಮಾತಾಡ್ತಾ ಇದ್ದೀರಾ? ಕರೆಕ್ಟ್ ಆಗಿ ಮಾತಾಡಿ. ನೀವು ಹೀಗೆ ಮಾತ್ನಾಡೋದು ಸರಿನಾ” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯೆ ಪ್ರವೇಶಿಸಿ ದರ್ಪ ಮೆರೆದಿದ್ದರು.ಕೋಲಾರಕ್ಕೆ ನೀರು ಸರಿಯಾಗಿ ಸಿಗುತ್ತಿಲ್ಲ ಎಂದು ದೂರು ನೀಡಲು ಬಂದಿದ್ದೇವೆ. ಸಮಾಧಾನದಿಂದ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ರೈತ ಸಂಘದ ಕಾರ್ಯಕರ್ತರು ಹೇಳಿದರೂ ಕ್ಯಾರೆ ಎನ್ನದ ಪೊಲೀಸ್ ಅಧಿಕಾರಿಯೊಬ್ಬರು, “ನಿನ್ನ ಮಾತು ಜಾಸ್ತಿಯಾತ್ತು, ಸಣ್ಣ ವಿಷಯವನ್ನು ಬೆಳೆಸುತ್ತಿದ್ದೀಯ” ಎಂದು ಕಾರ್ಯಕರ್ತೆಯೊಬ್ಬರನ್ನ ಹಿಂದಕ್ಕೆ ನೂಕಿ ದರ್ಪ ಮೆರೆದಿದ್ದರು. ಸಚಿವರ ಹಾಗೂ ಪೊಲೀಸರ ನಡೆಯ ಬಗ್ಗೆ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದರು.Sign in to your account
Username or Email Address


Password

 Remember Me


