ಚಿಕ್ಕಮಗಳೂರು/ಶಿವಮೊಗ್ಗ: ಇದ್ದಕ್ಕಿದ್ದಂತೆಯೇ ಬಂದ ಭಾರೀ ಗಾಳಿ ಮಳೆಗೆ ಗ್ರಾಮದ 50ಕ್ಕೂ ಹೆಚ್ಚು ಮನೆಯ ಮೇಲ್ಛಾವಣಿಗಳು ಹಾರಿ ಹೋಗಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಉಡುಗಣಿ ಗ್ರಾಮದಲ್ಲಿ ರಾತ್ರಿ ಇದ್ದಕ್ಕಿದ್ದಂತೆಯೇ ಬಂದ ಬಿರುಗಾಳಿ ಸಹಿತ ಮಳೆಗೆ ಮನೆ ಮೇಲ್ಛಾವಣಿಗಳು ಹಾರಿ ಹೋಗಿವೆ. ಅದೇ ರೀತಿ ವಿದ್ಯುತ್ ಕಂಬ ಹಾಗೂ ತೆಂಗಿನ ಮರ ಬಿದ್ದು ಮನೆಗಳು ಹಾನಿಗೆ ಒಳಗಾಗಿವೆ.ಏಕಾಏಕಿ ನಡೆದ ಘಟನೆಯಿಂದ ಮನೆಯಲ್ಲಿದ್ದವರು ಗಾಬರಿಗೆ ಒಳಗಾಗಿದ್ದಾರೆ. ಕೆಲವರ ಮನೆಯ ಮೇಲ್ಛಾವಣಿ ಹಾರಿ ಹೋಗಿರುವುದರಿಂದ ಮಳೆಯ ನೀರು ಮನೆಯ ಒಳಗೆ ಹೋಗಿದ್ದು, ಮನೆಯ ವಸ್ತುಗಳು ಹಾಳಾಗಿವೆ. ಅದೇ ರೀತಿ ಕಟಾವಿಗೆ ಬಂದ ಭತ್ತದ ಪೈರು ಸಹ ನಾಶವಾಗಿವೆ.ಇನ್ನೂ ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ಮಲೆನಾಡಿಗರ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು, ಕೊಪ್ಪ ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಇತರೇ ಮಲೆನಾಡು ಭಾಗಗಳಾದ ಎನ್.ಆರ್.ಪುರ, ಬಾಳೆಹೊನ್ನೂರು ಬಾಗದಲ್ಲೂ ಕಳೆದ ದಿನ ಸಾಧಾರಣ ಮಳೆಯಾಗಿದೆ.ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಹಾಗೂ ಕೊಟ್ಟಿಗೆ ಹಾರದ ಸುತ್ತಮುತ್ತ ವರುಣದೇವ ಅಬ್ಬರಿಸಿದ್ದು, ಬಿರುಗಾಳಿ, ಗುಡುಗು-ಸಿಡಿಲಿನೊಂದಿಗೆ ಸುರಿದ ಮಹಾಮಳೆಗೆ ವಿದ್ಯುತ್ ಕಂಬಗಳು ಹಾಗೂ ರಸ್ತೆ ಬದಿಯ ಮರಗಳು ಧರೆಗುರುಳಿವೆ. ರಸ್ತೆ ಆರ್ಭಟಕ್ಕೆ ವಾಹನ ಸವಾರರು ದಾರಿ ಕಾಣದೆ ರಸ್ತೆಯ ಬದಿಯಲ್ಲಿ ಗಾಡಿಗಳನ್ನ ಸೈಡಿಗೆ ಹಾಕಿ ಮಳೆ ಪ್ರಮಾಣ ಕಡಿಮೆಯಾದ ಮೇಲೆ ಮುಂದೆ ಸಾಗಿದ್ದಾರೆ.ಮೂಡಿಗೆರೆ ಬಾಳೂರು, ಮತ್ತಿಕಟ್ಟೆ, ಹೊಸಳ್ಳಿ ಹಾಗೂ ಬಣಕಲ್ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಕಳೆದೊಂದು ತಿಂಗಳಿಂದ ಮಳೆ ಸುರಿಯುತ್ತಿತ್ತು. ಆದರೆ ಭಾನುವಾರ ಸುರಿದ ಮಳೆ ಎಂದೂ ಸುರಿದಿರಲಿಲ್ಲ. ಈ ವರ್ಷದ ಮೊದಲ ಮಹಾಮಳೆ ಮಲೆನಾಡಿಗರನ್ನ ಚಿಂತಿಗೀಡುಮಾಡಿದೆ. ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆ-ಕೊಂಬೆಗಳು ಬಿದ್ದಿರುವುದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.Sign in to your account
Username or Email Address


Password

 Remember Me


