ಹಾಸನ: ಗ್ರೀನ್‍ಝೋನ್‍ನಲ್ಲಿರುವ ಹಾಸನ ಜಿಲ್ಲೆಗೆ ಹೊಸ ಸವಾಲು ಎದುರಾಗಿದೆ. ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಮೂರು ಸಾವಿರ ಜನ ಆಗಮಿಸಲು ಕಾಯುತ್ತಿರುವ ಬಗ್ಗೆ ಎಂಎಲ್‍ಸಿ ಗೋಪಾಲಸ್ವಾಮಿ ಮಾಹಿತಿ ನೀಡಿದ್ದು, ಅವರೆಲ್ಲರನ್ನು ಸಮರ್ಪಕವಾಗಿ ಕ್ವಾರಂಟೈನ್ ಮಾಡುವ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.ಮುಂಬೈನಿಂದ ಆಗಮಿಸಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ಮೂಲದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಆತ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ 5 ಗ್ರಾಮಗಳಿಗೆ ಭೇಟಿ ನೀಡಿ ಸ್ನೇಹಿತರು, ಸಂಬಂಧಿಕರನ್ನು ಭೇಟಿ ಮಾಡಿ ಹೋಗಿದ್ದ. ಈ ಹಿನ್ನೆಲೆಯಲ್ಲಿ 5 ಗ್ರಾಮಗಳನ್ನು ಸೀಲ್‍ಡೌನ್ ಮಾಡಿದ್ದರಿಂದ ಎಂಎಲ್‍ಸಿ ಗೋಪಾಲಸ್ವಾಮಿ ಗ್ರಾಮದ ಜನರಿಗೆ ಅಗತ್ಯ ವಸ್ತುಗಳಿಗೆ ತೊಂದರೆ ಆಗಬಾರದು ಎಂದು ಆಹಾರ ಸಾಮಗ್ರಿ ಕಿಟ್ ವಿತರಣೆ ಮಾಡಿದರು.ಇದೇ ವೇಳೆ ಹಾಸನ ಜಿಲ್ಲೆ ಗ್ರೀನ್‍ಝೋನ್‍ನಲ್ಲಿದ್ದರೂ ಮುಂದಿನ ದಿನಗಳಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಮಾತನಾಡಿದರು. ಮುಂಬೈನಿಂದ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಬರಲು 3 ಸಾವಿರ ಜನ ಅರ್ಜಿ ಹಾಕಿಕೊಂಡಿದ್ದಾರೆ. ಚನ್ನರಾಯಪಟ್ಟಣದ ಪಕ್ಕದ ತಾಲೂಕುಗಳಾದ ಕೆ.ಆರ್.ಪೇಟೆ ಮತ್ತು ನಾಗಮಂಗಲಕ್ಕೆ ಸುಮಾರು 10 ಸಾವಿರ ಜನ ಬರುವ ಮಾಹಿತಿ ಇದೆ. ಅವರ ಆರೋಗ್ಯ ಪರಿಶೀಲನೆ ಕಟ್ಟುನಿಟ್ಟಾಗಿ ಆಗಬೇಕು. ಆರ್ಥಿಕವಾಗಿ ಚೆನ್ನಾಗಿರುವವರಿಗೆ ಅವರ ಖರ್ಚಿನಲ್ಲೇ ಹೋಟೆಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿ ಮಾಡಬೇಕು. ಬಡ ಜನರಿಗೆ ಸರ್ಕಾರದ ಸಹಾಯದಲ್ಲಿ ಕ್ವಾರಂಟೈನ್ ಮಾಡಬೇಕು ಎಂದರು.ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರ ಸಚಿವರ ಬಗ್ಗೆ ಬೇಸರ ವ್ಯಕ್ತಪಡಿಸಿದ ಗೋಪಾಲಸ್ವಾಮಿ ಅವರು, ಮೂರು-ನಾಲ್ಕು ಜನ ಸಚಿವರು ಬಿಟ್ಟು ಬೇರೆಯವರಿಗೆ ಕೊರೊನಾ ಭಯವಿದೆ. ನಮಗೆ ಕೊರೊನ ಬಂದುಬಿಡುತ್ತೆ ಎಂಬ ರೀತಿಯ ಭೀತಿ ಸಚಿವರಲ್ಲಿದೆ ಎಂದು ವ್ಯಂಗ್ಯವಾಡಿದರು.Sign in to your account
Username or Email Address


Password

 Remember Me


