ಬೆಂಗಳೂರು: ಬೇಗೂರು ಪೊಲೀಸ್ ಠಾಣೆಯ ಪೇದೆಗೆ ಕೊರೊನಾ ಸೋಂಕು ತಗುಲಿರೋದು ಸೋಮವಾರ ದೃಢಪಟ್ಟಿದೆ. ಈ ಪೇದೆಗೆ ಸೋಂಕು ಹೇಗೆ ತಗುಲಿದೆ ಎಂಬುವುದು ಯಕ್ಷ ಪ್ರಶ್ನೆಯಾಗಿದ್ದು, ಉತ್ತರಕ್ಕಾಗಿ ಆರೋಗ್ಯ ಇಲಾಖೆ ತೆಲೆಕೆಡಿಸಿಕೊಂಡಿದೆ.ಕೊರೊನಾ ಪಾಸಿಟಿವ್ ಪೇದೆಗೆ ಸೋಂಕು ಹೇಗೆ ತಗುಲಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅಪಘಾತದ ಕಾರಣದಿಂದ ಇಪ್ಪತ್ತು ದಿನ ರಜೆಯಲ್ಲಿದ್ದ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಂಡುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೇದೆಗೆ ಇಬ್ಬರು ಅಣ್ಣಂದಿರು. ಮೂವರು ಜೊತೆಯಾಗಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮೊದಲನೇ ಅಣ್ಣ ವೈದ್ಯ, ಎರಡನೇ ಅಣ್ಣ ಬಯೋಕಾನ್ ಸಂಸ್ಥೆಯ ಉದ್ಯೋಗಿ. ಎರಡನೇ ಅತ್ತಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ. ಹಾಗಾಗಿ ಅತ್ತಿಗೆಯಿಂದಲೇ ಪೇದೆಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ.ಸೋಂಕಿತ ಪೇದೆಯ ಮತ್ತೊಬ್ಬ ಅತ್ತಿಗೆ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೇದೆಯ ಪತ್ನಿ ಮತ್ತು ಮಗು ಸಹ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 9 ಜನರು ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 45 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬಸ್ಥರಿಗೆ ಕೊರೊನಾ ಸೋಂಕು ತಗುಲಿದ್ರೆ ವಿಕ್ಟೋರಿಯಾ ಆಸ್ಪತ್ರೆ, ಬಯೋಕಾನ್ ಸಂಸ್ಥೆ, ಕಂದಾಯ ಇಲಾಖೆಯ ಕಚೇರಿ, ಸೋದರನ ಆಸ್ಪತ್ರೆಯ ಸಿಬ್ಬಂದಿಗೆ ಕ್ವಾರಂಟೈನ್ ಮಾಡಬೇಕಾಗುತ್ತದೆ.ಪೊಲೀಸರಲ್ಲಿಯೂ ಆತಂಕ: ಪೇದೆ ರಜೆಗೂ ತೆರಳುವ ಮುನ್ನ 15 ದಿನ ಠಾಣೆಗೆ ಬಂದಿದ್ದರು. ಚೆಕ್‍ಪೋಸ್ಟ್ ನಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಈ ನಡುವೆ ಮಂಡ್ಯ ಜಿಲ್ಲೆಯ ಮಳವಳ್ಳಿಗೂ ಭೇಟಿ ನೀಡಿದ್ದರು. ಒಂದು ವೇಳೆ ಮಳವಳ್ಳಿಗೆ ಭೇಟಿ ನೀಡಿದ್ದಾಗ ಅಥವಾ ಅತ್ತಿಗೆಯಿಂದ ಸೋಂಕು ತಗುಲಿರೋದು ದೃಢಪಟ್ಟರೇ ಪೊಲೀಸರು ನಿಟ್ಟುಸಿರು ಬಿಡಬಹುದು. ಕರ್ತವ್ಯದಲ್ಲಿದ್ದಾಗಲೇ ಸೋಂಕು ತಗುಲಿದ್ದು ಖಾತ್ರಿಯಾದ್ರೆ ಇಡೀ ಪೊಲೀಸ್ ಠಾಣೆಯನ್ನ ಬಂದ್ ಮಾಡಿ, ಎಲ್ಲ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಬೇಕಾಗುತ್ತದೆ. ಪೇದೆಗೆ ಅಪಘಾತವಾದಾಗ ಆರೋಗ್ಯ ವಿಚಾರಿಸಲು ಠಾಣೆಯ ಕೆಲ ಸಿಬ್ಬಂದಿ ಆತನ ಮನೆಗೆ ತೆರಳಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ.Sign in to your account
Username or Email Address


Password

 Remember Me


