ಬೆಂಗಳೂರು: ಕನ್ನಡ ಹಿರಿಯ ಸಾಹಿತಿ ನಿತ್ಯೋತ್ಸವ ಕವಿ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್ ನಿಸಾರ್ ಅಹಮದ್(84) ಇಂದು ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಿಸಾರ್ ಅಹಮದ್ ಈ ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಿಸಾರ್ ಅಹಮದ್‍ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.10ನೇ ವಯಸ್ಸಿನಲ್ಲೇ ಸಾಹಿತ್ಯದ ಮೇಲೆ ಆಸಕ್ತಿ ಹೊಂದಿದ್ದ ಕವಿಗೆ ರಾಜ್ಯೋತ್ಸವ, ನಾಡೋಜ, ಪದ್ಮಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಒಲಿದು ಬಂದಿದೆ. 1974ರಲ್ಲಿ ಪ್ರಕಟವಾದ ‘ನಿತ್ಯೋತ್ಸವ’ ಕವನ ಸಂಕಲನ ನಿಸಾರ್ ಅವರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟಿತು. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ. ಕೆಎಸ್‍ಆರ್ ಅವರ ಅನೇಕ ಕವಿತೆಗಳು ಸುಗಮ ಸಂಗೀತದ ಧ್ವನಿ ಸುರುಳಿಗಳ ಮೂಲಕ ಕನ್ನಡಿಗರನ್ನು ತಲುಪಿವೆ.ಜನಪ್ರಿಯತೆ ಗಳಿಸಿರುವ ‘ಸುಮಧುರ’ ಮತ್ತು ‘ನವೋಲ್ಲಾಸ’ ಕನ್ನಡದ ಮೊದಲ ಜೋಡಿ ಧ್ವನಿ ಸುರುಳಿಗಳು. ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆ ಗೊಂಡಿವೆ.Sign in to your account
Username or Email Address


Password

 Remember Me


