ಬೆಂಗಳೂರು: ಹೆಮ್ಮಾರಿ ಕೊರೊನಾ ಕಂಟ್ರೋಲ್‍ಗೆ ಲಾಕ್‍ಡೌನ್ ಘೋಷಿಸಿದ್ದರೂ ಬೆಂಗಳೂರಿಗರು ಎಚ್ಚೆತ್ತುಕೊಂಡಿಲ್ಲ. ನಾಯಿಯನ್ನು ಹೊರಗೆ ಓಡಾಡಿಸೋದು, ವಾಕಿಂಗ್‍ಗೆ ಹೋಗೋದು, ಸೈಕ್ಲಿಂಗ್ ಮಾಡೋದರ ನೆಪದಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ವೇಳೆ ಮನೆಯಿಂದ ಹೊರ ಬರುತ್ತಿದ್ದರು. ಇದೀಗ ಇದಕ್ಕೂ ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಬ್ರೇಕ್ ಹಾಕಿದ್ದಾರೆ.ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರನ್ನು ಕಂಟ್ರೋಲ್ ಮಾಡೋಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಭಾರತದ್ಯಾಂತ ಇನ್ನೂ ಎರಡು ವಾರಗಳ ಕಾಲ, ಲಾಕ್‍ಡೌನ್ ಮುಂದುವರಿದಿದೆ. ಕಳೆದ 20 ದಿನಗಳಿಂದ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನರು ಮಾತ್ರ ಚಿಕ್ಕಪುಟ್ಟ ಕಾರಣಗಳನ್ನು ಹೇಳಿಕೊಂಡು ಓಡಾಡುತ್ತಿದ್ದರು. ಪೊಲೀಸರು ಇದ್ದರೂ ಕೂಡ ವಾಕಿಂಗ್ ಮಾಡೋ ನೆಪದಲ್ಲಿ ಕೆಲವರು ಹೊರಗೆ ಬಂದರೆ, ಇನ್ನು ಕೆಲವರು ನಾಯಿ ಜೊತೆಗೆ ವಾಕಿಂಗ್ ಬರುತ್ತಿದ್ದಾರೆ. ಪೊಲೀಸರು ಪ್ರಶ್ನೆ ಮಾಡಿದರೆ ನಾಯಿ ವಾಕಿಂಗ್ ಸರ್ ಅಂತ ಡ್ರಾಮಾ ಮಾಡುತ್ತಿರುವುದು ಹೆಚ್ಚಾಗಿದ್ದು, ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.ವಾಕಿಂಗ್ ಮಾಡೋರು ಮನೆಯಲ್ಲಿ ಮಾಡಬೇಕು. ನಾಯಿ ಇದ್ದರೂ ಕೂಡ ಮನೆಯ ಅಕ್ಕಪಕ್ಕದಲ್ಲೇ ವಾಕಿಂಗ್ ಮಾಡಿಸಬೇಕು. ಬಿಬಿಎಂಪಿ ಯಾವುದೇ ಸೂಚನೆ ಕೊಟ್ಟರು ನಾವು ಸೂಕ್ತ ಬಂದೋಬಸ್ತ್ ಮಾಡುತ್ತೀವಿ. ಹೀಗಾಗಿ ರೋಡಿಗೆ ಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೋದಾಗಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ನಗರದ ಬಾರ್ಡರ್‌ಗಳಲ್ಲಿ ಸಿಸಿಟಿವಿ ಹಾಕುತ್ತೀವಿ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡುತ್ತೀವಿ. ಏಪ್ರಿಲ್ 20ರ ವರೆಗೆ ಬಿಗಿ ಪೊಲೀಸ್ ಕ್ರಮ ಕೈಗೊಳ್ಳುತ್ತೀವಿ. ಸಂಬಂಧಿಕರಿಗೆ ಹುಷಾರಿಲ್ಲ, ಅಜ್ಜ ತೀರಿಕೊಂಡಿದ್ದಾರೆ ಅವೆಲ್ಲ ನಡೆಯಲ್ಲ. 1.80 ಲಕ್ಷ ಪಾಸ್ ನೀಡಲಾಗಿದೆ. ಎಲ್ಲಾ ಪಾಸ್‍ಗಳು 20ರ ವರೆಗೂ ಮುಂದುವರಿಯುತ್ತೆ. ಎಮರ್ಜೆನ್ಸಿ ಪಾಸ್ ಬೇಕಾದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಕ್ತ ದಾಖಲೆ ಕೊಟ್ಟು ಹೊಸ ಪಾಸ್ ಪಡೆಯಬಹುದು. ನಕಲಿ ಪಾಸ್ ಪಡೆದು ಸಿಕ್ಕಿ ಬಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೀವಿ ಎಂದು ವಾರ್ನ್ ಮಾಡಿದ್ದಾರೆ.ಅಲ್ಲದೇ ಅಗತ್ಯ ವಸ್ತುಗಳ ಸರಬರಾಜು ಮಾಡಲು ಅವಕಾಶ ಇದೆ. ಬೆಂಗಳೂರನಲ್ಲಿ 30 ಸಾವಿರಕ್ಕೂ ಹೆಚ್ಚು ವಾಹನಗಳು ಜಪ್ತಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.Sign in to your account
Username or Email Address


Password

 Remember Me


