ಚಿಕ್ಕಮಗಳೂರು: ಲಾಕ್‍ಡೌನ್‍ನಿಂದಾಗಿ ಬಡವರು ಹಾಗೂ ಕೂಲಿ ಕಾರ್ಮಿಕರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಏಪ್ರಿಲ್ 10ರ ಶುಕ್ರವಾರ ಎಲ್ಲರೂ ಒಟ್ಟುಗೂಡಿ ಬೆಳಗ್ಗೆ 6 ರಿಂದ ಸಂಜೆ 6 ವರೆಗೆ ಉಪವಾಸವಿದ್ದು ಕಾರ್ಮಿಕ ವರ್ಗಕ್ಕೆ ಧೈರ್ಯ ತುಂಬೋಣ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಕರೆ ನೀಡಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ನಗರದಲ್ಲಿ ಬದುಕು ಕಟ್ಟಿಕೊಂಡಿದ್ದ ಗ್ರಾಮೀಣ ಭಾಗದ ಜನ ಇಂದಿನ ಪರಿಸ್ಥಿತಿಯಿಂದ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಉದ್ಯೋಗ ಕಳೆದುಕೊಂಡು ಸಾವಿರಾರು ಜನ ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಜನಸಾಮಾನ್ಯರು ಶುಕ್ರವಾರ ಒಂದು ಹೊತ್ತು ಉಪವಾಸವಿದ್ದು ಅವರಲ್ಲಿ ಧೈರ್ಯ ತುಂಬೋಣ ಎಂದು ಮನವಿ ಮಾಡಿದ್ದಾರೆ.ಒಂದು ಹೊತ್ತಿನ ಉಪವಾಸದಿಂದ ಎಲ್ಲವೂ ಸರಿ ಹೋಗುತ್ತೆ ಅಂತಲ್ಲ. ಸರ್ಕಾರಕ್ಕೆ ಆರ್ಥಿಕ ಸಂಕಷ್ಟದ ಮನವರಿಕೆ ಮಾಡಿದಂತಾಗುತ್ತೆ ಎಂದರು. ನಗರದ ಶಂಕರಪುರದ ಸಾವಿತ್ರಮ್ಮ-ಮುನಿಸ್ವಾಮಿ ಎಂಬ ದಲಿತರ ಮನೆಯಲ್ಲಿ ಉಪವಾಸ ಕೈಗೊಳ್ಳಲಿರೋ ವೈ.ಎಸ್.ವಿ ದತ್ತ, ಉಪವಾಸಕ್ಕೆ ಚಿಕ್ಕಮಗಳೂರು ಸಮಾನ ಮನಸ್ಕರರು ಕರೆ ನೀಡಿದ್ದು, ಕೊರೊನಾ ಹಿಮ್ಮೆಟ್ಟಿಸುವ ಸರ್ಕಾರದ ನಿಯಮವನ್ನ ಪಾಲಿಸಿಕೊಂಡು ತಮ್ಮ ಮನೆಯಲ್ಲೇ ಉಪವಾಸ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.ರಾಜ್ಯಮಟ್ಟದಲ್ಲಿ ಗ್ರಾಮ ಸೇವಾ ಸಂಘದ ಮುಖ್ಯಸ್ಥ, ರಂಗಕರ್ಮಿ ಪ್ರಸನ್ನ ಅವರು ಒಂದು ಹೊತ್ತಿನ ಉಪವಾಸಕ್ಕೆ ಕರೆ ನೀಡಿದ್ದು, ನಾವೆಲ್ಲಾ ಉಪವಾಸ ಮಾಡುವ ಮೂಲಕ ಅವರಿಗೆ ಬೆಂಬಲಿಸೋಣ ಎಂದರು.ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯದ ಕ್ರಮ ಸ್ವಾಗತಾರ್ಹ. ಆದರೆ ಲಾಕ್‍ಡೌನ್ ತೆರವಿನ ಬಳಿಕ ದೇಶ ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ ಎದುರಿಸುವ ಸನ್ನಿವೇಶವಿದೆ. ದೇಶದ ಈ ಪರಿಸ್ಥಿತಿಗೆ ಮಹಾತ್ಮ ಗಾಂಧಿ ಕನಸು ಮತ್ತು ಅಂಬೇಡ್ಕರ್ ಆರ್ಥಿಕ ನೀತಿ ಕಡೆಗಣಿಸಿ ಆಡಳಿತ ನಡೆಸಿದ ಎಲ್ಲ ರಾಜಕೀಯ ಪಕ್ಷಗಳು ಹೊಣೆ ಹೊರಬೇಕು ಎಂದರು.Sign in to your account
Username or Email Address


Password

 Remember Me


