ಮಂಡ್ಯ: ಸ್ಯಾಂಡಲ್‍ವುಡ್ ನಟಿ ಮೂರು ಸಿನಿಮಾಗಳಿಗೆ ಸಹಿ ಹಾಕಿ ಅಡ್ವಾನ್ಸ್ ತೆಗೆದುಕೊಂಡು ನಿರ್ದೇಶಕನೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆ ಯತ್ನಿಸಿದ್ದ ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಅಜ್ಜಿ ಮೃತಪಟ್ಟಿದ್ದಾರೆ.ಕನ್ನಡ ಚಿತ್ರರಂಗದಲ್ಲಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಇದೀಗ ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಎಂಬ ಸಿನಿಮಾಗಳಿಗೆ ಸಹಿ ಹಾಕಿ ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಎಂಬವನ ಜೊತೆ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ವಿಜಯಲಕ್ಷ್ಮಿ, ಕಳೆದ 10 ವರ್ಷಗಳಿಂದ ಚನ್ನಪಟ್ಟಣದಲ್ಲಿ ವಾಸವಾಗಿದ್ದರು. ತಮ್ಮ ಸಾಕು ತಂದೆ ಸ್ವಾಮಿ ಅವರ ಪೋಷಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದರು.ನಟಿ ವಿಜಯಲಕ್ಷ್ಮಿ ಶಿವರಾಜ್‍ಕುಮಾರ್ ನಟನೆಯ ಆಯುಷ್ಮಾನುಭವ ಸೇರಿದಂತೆ 16 ಚಿತ್ರಗಳಲ್ಲಿ ಸಹ ನಟಿಯಾಗಿ ನಟಿಸಿದ್ದರು. ನಂತರ ತುಂಗಾಭಧ್ರಾ, ಪ್ರೇಮಮಹಲ್, ಜವಾರಿ ಲವ್, ಪ್ರೊಡಕ್ಷನ್ ನಂ.1 ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸುವ ಅವಕಾಶ ಬಂದಿದ್ದವು. ಈ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ಅರ್ಧದಷ್ಟು ಶೂಟಿಂಗ್ ಆಗಿದೆ.ತುಂಗಾಭದ್ರಾ ಚಿತ್ರದ ನಿರ್ದೇಶಕ ಆಂಜನಪ್ಪ ಜೊತೆ ಶೂಟಿಂಗ್ ವೇಳೆ ಲವ್ ಆಗಿದೆ ಎಂದು ವಿಜಯಲಕ್ಷ್ಮಿ ಸಾಕು ತಂದೆ ಸ್ವಾಮಿ ಹೇಳಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಯಚೂರಿಗೆ ಶೂಟಿಂಗ್‍ಗಾಗಿ ಹೋದ ಮಗಳು ಮತ್ತೆ ಮನೆಗೆ ಬಂದಿರಲಿಲ್ಲ. ಇದಕ್ಕೆ ಗಾಬರಿಯಾದ ಸ್ವಾಮಿ ಹಾಗೂ ತಾಯಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ನಂತರ ಆಂಜನಪ್ಪ ಜೊತೆ ವಿಜಯಲಕ್ಷ್ಮಿ ಇದ್ದಾಳೆ ಎಂದು ತಿಳಿದು ಬಂದಿತ್ತು. ಆದರೆ ಸ್ವಾಮಿ ಅವರು ಆಂಜನಪ್ಪನನ್ನು ವಿಚಾರಿಸಿದರೆ, ವಿಜಯಲಕ್ಷ್ಮಿ ನನ್ನ ಬಳಿ ಇಲ್ಲ ಎಂದು ಹೇಳಿದ್ದ. ಇದಾದ ಬಳಿಕ ಡಿಸೆಂಬರ್ ಮೂರನೇ ವಾರದಲ್ಲಿ ವಿಜಯಲಕ್ಷ್ಮಿ ಮನೆಗೆ ಬಂದಿದ್ದಳು. ಆಗ ಆಕೆಗೆ ಮನೆಯವರು ಬೈದು ಬುದ್ಧಿ ಹೇಳಿದ್ದರು. ಪೋಷಕರ ಮಾತಿನಂತೆ ನಡೆದುಕೊಳ್ಳುವ ಭರವಸೆ ನೀಡಿದ್ದ ವಿಜಯಲಕ್ಷ್ಮಿ, ಆಂಜನಪ್ಪ ತನ್ನನ್ನು ಒಂದು ಮನೆಯಲ್ಲಿ ಇರಿಸಿದ್ದ. ಮುಖಕ್ಕೆ ಬಟ್ಟೆ ಕಟ್ಟಿದ್ದ. ಇನ್ನು ಮುಂದೆ ನಾನು ಅವನೊಂದಿಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಳು.ವಿಜಯಲಕ್ಷ್ಮಿ ಜನವರಿ 3 ರಂದು ಬೆಳಗ್ಗೆ ಇದ್ದಕ್ಕಿಂದ್ದಂತೆ ಕಾಣೆಯಾಗಿದ್ದಳು. ಇದರಿಂದ ಮತ್ತೆ ಗಾಬರಿಗೊಂಡ ಸಾಕು ತಂದೆ ಸ್ವಾಮಿ ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಆದರೆ ವಿಜಯಲಕ್ಷ್ಮಿಯ ಪತ್ತೆ ಆಗಲಿಲ್ಲ. ಹೀಗಾಗಿ ಅವರು ಮತ್ತೆ ಆಂಜನಪ್ಪನಿಗೆ ಫೋನ್ ಮಾಡಿ ವಿಜಯಲಕ್ಷ್ಮಿ ಎಲ್ಲಿ ಎಂದು ವಿಚಾರಿಸಿದ್ದರು. ಆದರೆ ಆಂಜನಪ್ಪ, ಆಕೆ ನನ್ನ ಬಳಿ ಇಲ್ಲ ಎಂದು ಹೇಳಿದ್ದ. ಈ ಬೆನ್ನಲ್ಲೇ ಆಂಜನಪ್ಪನ ಸಂಬಂಧಿಯೊಬ್ಬರು ಸ್ವಾಮಿ ಅವರಿಗೆ ಫೋನ್ ಮಾಡಿ, ವಿಜಯಲಕ್ಷ್ಮಿ ಆಂಜನಪ್ಪ ಬಳಿಯೇ ಇದ್ದಾಳೆ ಎಂದು ತಿಳಿಸಿದ್ದರು.ಖಚಿತ ಮಾಹಿತಿಯೊಂದಿಗೆ ಸ್ವಾಮಿ ಅವರು ಆಂಜನಪ್ಪ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಆಂಜನಪ್ಪ ಮತ್ತು ವಿಜಯಲಕ್ಷ್ಮಿ ಇಬ್ಬರು ಸಹ ಇರಲಿಲ್ಲ. ಹೀಗಾಗಿ ಸ್ವಾಮಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಚನ್ನಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮಗಳು ಕಾಣೆಯಾದ ಆತಂಕದಲ್ಲಿ ಇದ್ದ ವಿಜಯಲಕ್ಷ್ಮಿ ತಾಯಿ ಹಾಗೂ ಅಜ್ಜಿಗೆ ಪ್ರತಿ ದಿನವೂ ನಿರ್ಮಾಪಕರು ಬಂದು ನಿಮ್ಮ ಮಗಳು ಎಲ್ಲಿ ಎಂದು ಕೇಳುತ್ತಿದ್ದರು. ಹೀಗೆ ಪದೇ ಪದೇ ಕೇಳುತ್ತಿದ್ದರಿಂದ ಮನನೊಂದ ವಿಜಯಲಕ್ಷ್ಮಿ ತಾಯಿ ಮತ್ತು ಅಜ್ಜಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷ ತೆಗೆದುಕೊಂಡ ಪರಿಣಾಮ ವಿಜಯಲಕ್ಷ್ಮಿ ಅಜ್ಜಿ ಸಾವನ್ನಪ್ಪಿದ್ದು, ತಾಯಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.Sign in to your account
Username or Email Address


Password

 Remember Me


