ಬಳ್ಳಾರಿ: ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನದಲ್ಲಿದೆ, ಅಂತರಾಷ್ಟ್ರೀಯ ಮಟ್ಟದ ರೂಪಾಯಿ ಮೌಲ್ಯ ಕುಸಿಯುತ್ತಿದ್ದು ದೇಶ ದಿವಾಳಿಯಾಗಲು ಬಿಜೆಪಿ ಕಾರಣ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಡವರು ಬದಕಲು ಆಗುತ್ತಿಲ್ಲ. ತೈಲ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್ ಬೆಲೆ 100 ರೂ. ಗಡಿದಾಟುವ ಪರಿಸ್ಥಿತಿ ಬಂದಿದ್ದು, ಜನಸಾಮಾನ್ಯರು 10 ಗ್ರಾಂ ಚಿನ್ನ ಕೊಳ್ಳಲು ಕಷ್ಟವಾಗಿದೆ. ಜನ ಸಾಮಾನ್ಯರ ಬದುಕಿಗೆ ಅಗತ್ಯವಿರುವ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ, ಕೇಂದ್ರ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಉಂಟಾದ ಪ್ರವಾಹದ ಹಾನಿ ತುಂಬಲು ಕೇಂದ್ರ ಸರ್ಕಾರ ಅಗತ್ಯ ಹಣ ನೀಡುತ್ತಿಲ್ಲ. ಅನುದಾನ ನೀಡುವಂತೆ ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಕಾಲು ಬೀಳುವುದು ಬಾಕಿ ಉಳಿದಿದೆ ಎಂದು ವ್ಯಂಗ್ಯವಾಡಿದರು.ಶಾಸಕ ಸೋಮಶೇಖರ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅವರು, ಅಲ್ಪನಿಗೆ ಅಧಿಕಾರ ಸಿಕ್ಕರೆ ಏನಾಗುತ್ತದೆ ಎನ್ನುವುದಕ್ಕೆ ಸೋಮಶೇಖರ್ ರೆಡ್ಡಿ ಮತ್ತು ಸಂಸದ ತೇಜಸ್ವಿ ಸೂರ್ಯ ಉತ್ತಮ ಉದಾಹರಣೆ. ಸೋಮಶೇಖರ್ ರೆಡ್ಡಿ ಅಲ್ಪಸಂಖ್ಯಾತರ ಬಗ್ಗೆ ಹೇಳಿದ್ದು ಅವರ ಮಾತಲ್ಲ, ಬಿಜೆಪಿಯ ಮಾತು. ಬಿಜೆಪಿಯವರ ಉದ್ದೇಶ ಸೋಮಶೇಖರ್ ರೆಡ್ಡಿ ಅವರ ಮಾತಿನಲ್ಲಿ ಎದ್ದು ಕಾಣುತ್ತದೆ ಎಂದು ಆರೋಪಿಸಿದರು.Sign in to your account
Username or Email Address


Password

 Remember Me


