ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆ ವಿಚಾರವಾಗಿ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ದಿನನಿತ್ಯ ಬಿಜೆಪಿ ಸರ್ಕಾರದ ಸಚಿವರು, ನಾಯಕರು ಸಹ ಪ್ರತಿಮೆ ನಿರ್ಮಾಣದ ವಿಚಾರವಾಗಿ ಭೂಮಿ ಮಂಜೂರಾತಿ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಬಿಜೆಪಿ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.ಹಾರೋಬೆಲೆಯ ಕಪಾಲ ಬೆಟ್ಟಕ್ಕೆ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ನೇತೃತ್ವದ ಸುಮಾರು 50 ಮುಖಂಡರು, ಕಾರ್ಯಕರ್ತರ ತಂಡ ಕಪಾಲ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಾಲ ಬೆಟ್ಟದ ತಳಭಾಗದಿಂದಲೂ ಕೂಡಾ ನಡೆದುಕೊಂಡೇ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದವರೆಗೆ ಬೆಟ್ಟದ ವೀಕ್ಷಣೆ ಹಾಗೂ ಈ ಹಿಂದಿನ ಕುರುಹುಗಳ ವೀಕ್ಷಣೆ ನಡೆಸುತ್ತಾ ಸಾಗಿದರು. ಅಲ್ಲದೇ ಬೆಟ್ಟದ ಮೇಲ್ಭಾಗದಲ್ಲಿನ ಶಿಲುಬೆಯ ತಳಭಾಗದಲ್ಲಿ ಇರುವ ಮುನೇಶ್ವರ ಸ್ವಾಮಿಯ ಕಲ್ಲುಗಳು ಹಾಗೂ ಮುನಿಸೇವೆ ಮಾಡುತ್ತಿದ್ದ ಕುರುಹುಗಳ ವೀಕ್ಷಣೆ ಮಾಡಿದ್ರು.ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆಯ ಜಾಗವವನ್ನು ವೀಕ್ಷಣೆ ಮಾಡಿದರು. ಅಲ್ಲದೇ ಕಪಾಲ ಬೆಟ್ಟ ಈ ಹಿಂದೆ ಮುನೇಶ್ವರ ಬೆಟ್ಟವಾಗಿತ್ತು ಅದಕ್ಕೆ ಸಂಬಂಧಪಟ್ಟ ಕುರುಹುಗಳು ಶಿಲುಬೆಯಿರುವ ಜಾಗದಲ್ಲಿದೆ ಎಂದರು. ಕಪಾಲ ಬೆಟ್ಟ ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಯಾವುದೇ ರೀತಿ ಘಟನೆ ನಡೆದರೂ ಇದೀಗ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಲಿದ್ದು, ಏಸುವಿನ ಮಾದರಿ ಪ್ರತಿಮೆ ಬಳಿ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.ಕಪಾಲ ಬೆಟ್ಟದ ಭೇಟಿ ವಿಚಾರವಾಗಿ ಮಾತನಾಡಿದ ಬಿಜೆಪಿ ಜಿಲ್ಲಾದ್ಯಕ್ಷ ಎಂ.ರುದ್ರೇಶ್, ಪ್ರತಿಮೆ ನಿರ್ಮಾಣದ ಜಾಗದ ವಸ್ತುಸ್ಥಿತಿ ಹೇಗಿದೆ, ಪ್ರತಿಮೆ ನಿರ್ಮಾಣಕ್ಕು ಮುನ್ನ ಬೆಟ್ಟದ ವಸ್ತುಸ್ಥಿತಿ ಹೇಗಿತ್ತು ಎಂಬ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ವರದಿ ಕೇಳಿದ್ದು ಜಾಗದ ವರದಿಯನ್ನ ನೀಡಲಿದ್ದೇವೆ. ಅದರ ಮುಂದಿನ ಕಾನೂನು ಕ್ರಮ ಏನಿದೆ ಅವರು ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಅವರು ಕೂಡಾ ಕಪಾಲ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.ಏಸುಕ್ರಿಸ್ತನ ಪ್ರತಿಮೆ ನಿರ್ಮಾಣದ ಬೆಟ್ಟದ ತುದಿಗೆ ತೆರಳಲು ಮಣ್ಣಿನ ರಸ್ತೆ ಹಲವಾರು ವರ್ಷಗಳಿಂದ ಇದೆ. ಇತ್ತೀಚೆಗೆ ಪ್ರತಿಮೆಯ ಶಿಲಾನ್ಯಾಸದ ವೇಳೆ ರಸ್ತೆಯನ್ನ ಜೆಸಿಬಿ ಬಳಸಿ ಅಲ್ಪಸ್ವಲ್ಪ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಆದರೆ ನಿನ್ನೆ ಕೆಲವರು ದಾರಿಯಲ್ಲಿ ಕೆಲವು ಕಡೆಗಳಲ್ಲಿ ಗುಂಡಿಗಳನ್ನು ತೋಡಿದ್ದು ವಾಹನಗಳು ಓಡಾಡಂತೆ ಮಾಡಿದ್ದಾರೆ. ಸುಮಾರು ಎರಡ್ಮೂರು ಅಡಿಗಳಷ್ಟು ಆಳವಾಗಿ ನಾಲ್ಕು ಕಡೆಗಳಲ್ಲಿ ಗುಂಡಿಗಳನ್ನು ತೆಗೆದಿದ್ದು ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ತೆರಳದಂತೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಈ ರೀತಿ ಮಾಡಿ ಬೆಟ್ಟಕ್ಕೆ ಬರುವವರ ವಿರುದ್ಧ ಹಗೆತನ ಸಾಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.Sign in to your account
Username or Email Address


Password

 Remember Me


