ಚಿಕ್ಕಬಳ್ಳಾಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಘಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.ರಾಧಾ(27) ಆತ್ಮಹತ್ಯೆಗೆ ಶರಣಾದ ಮಹಿಳೆ. 2010ರಲ್ಲೇ ರಾಧಾಳಿಗೆ ಮದುವೆಯಾಗಿತ್ತು. ಮದುವೆಯಾದ ಹೊಸದರಲ್ಲೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ರಾಧಾ ತನ್ನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ ಕಳೆದ 3-4 ವರ್ಷಗಳಿಂದ ಇಡಗೂರು ಗ್ರಾಮ ಪಂಚಾಯಯ್ತಿಯ ಕಾರ್ಯದರ್ಶಿ ಕಾರ್ತಿಕ್ ಜೊತೆ ಪ್ರೀತಿ-ಪ್ರೇಮ ಸಂಬಂಧ ಬೆಳೆಸಿದ್ದಳು.ಜಮೀನು ಅಳತೆ ದಾಖಲೆ ವಿಚಾರವಾಗಿ ಗ್ರಾಮಕ್ಕೆ ಬಂದಿದ್ದ ಕಾರ್ತಿಕ್, ರಾಧಾಳಿಗೆ ಪತಿಯಿಲ್ಲ ಎನ್ನುವ ಅಸಹಾಯಕತೆಯನ್ನಿ ಬಂಡವಾಳ ಮಾಡಿಕೊಂಡು ಆಕೆಯ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದನು. ಹೀಗಾಗಿ ತನ್ನನ್ನು ಕಾರ್ತಿಕ್ ಮದುವೆಯಾಗ್ತಾನೆ ಎಂದು ರಾಧಾ ನಂಬಿದ್ದಳು. ಆದರೆ ಕಳೆದ ಒಂದು ವರ್ಷದ ಹಿಂದೆಯೇ ಕಾರ್ತಿಕ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.ಆ ವಿಷಯ ಸಹ ಇತ್ತೀಚೆಗೆ ರಾಧಾಳಿಗೆ ಗೊತ್ತಾಗಿದೆ. ಜೋರಾಗಿ ದಬಾಯಿಸಿ ಕೇಳಿದ್ದಕ್ಕೆ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಏನ್ ಮಾಡ್ಕೋತಿಯಾ ಮಾಡ್ಕೋ ಹೋಗು ಎಂದು ಆವಾಜ್ ಹಾಕಿದ್ದನು. ಈ ನಡುವೆ ಕಾರ್ತಿಕ್‍ನ ಸಂಬಂಧದ ಬಗ್ಗೆ ಪತ್ನಿಗೂ ಸಹ ಗೊತ್ತಾಗಿ ಎರಡು ಮನೆಯವರು ಸೇರಿ ರಾಜೀ ಪಂಚಾಯತಿ ಸಹ ಮಾಡಿದ್ದರು. ಕೊನೆಗೆ ಒಂದಷ್ಟು ಹಣ ಕೊಟ್ಟು ರಾಧಾಳ ಸಂಬಂಧ ಕಡಿದುಕೊಳ್ಳೋಕೆ ಕಾರ್ತಿಕ್ ಮುಂದಾಗಿದ್ದನು. ಇದೇ ನೋವಿನಲ್ಲಿದ್ದ ರಾಧಾ ತನ್ನ ಬಾಳು ಹಿಂಗಾಯತಲ್ಲಾ ಎಂದು ಇಂದು ಬೆಳಗ್ಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ರಾಧಾ ಆತ್ಮಹತ್ಯೆ ಸುದ್ದಿ ತಿಳಿದ ಕಾರ್ತಿಕ್ ನಾಪತ್ತೆಯಾಗಿದ್ದು, ಗೌರಿಬಿದನೂರು ಪೊಲೀಸರು ಹುಟುಕಾಟ ನಡೆಸಿದ್ದಾರೆ. ಸದ್ಯ ಮಗಳ ಸಾವಿನಿಂದ ಕಂಗಲಾಗಿರುವ ತಾಯಿ ನಾಗಮ್ಮ ಕಾರ್ತಿಕ್ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾಳೆ.Sign in to your account
Username or Email Address


Password

 Remember Me


