ಬೆಂಗಳೂರು: ಸಾರ್ವಜನಿಕರಿಗೆ ನಿಮ್ಹಾನ್ಸ್ ಆಸ್ಪತ್ರೆಯ ಓಪಿಡಿ ಇಂದು ಬಂದ್ ಆಗಿರುತ್ತದೆ ಎನ್ನುವ ಬಗ್ಗೆ ಮಾಹಿತಿ ಇರದ ಹಿನ್ನೆಲೆ ಆಸ್ಪತ್ರೆಯಲ್ಲಿ ರೋಗಿಗಳು ಕಿಕ್ಕಿರಿದು ತುಂಬಿದ್ದು, ವೈದ್ಯರಿಲ್ಲದೆ ಚಿಕಿತ್ಸೆಗಾಗಿ ನರಳಾಡುತ್ತಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಪ್ರತಿಭಟನೆಗೆ ಕರೆಕೊಟ್ಟಿದ್ದು, ರಾಜ್ಯದಲ್ಲೂ ವೈದ್ಯಕೀಯ ಸೇವೆ ವ್ಯತ್ಯಯವಾದ ಪರಿಣಾಮ ರೋಗಿಗಳು ಪರಡಾಡುತ್ತಿದ್ದಾರೆ.ನಿಮ್ಹಾನ್ಸ್ ಆಸ್ಪತ್ರೆ ಓಪಿಡಿ ಬಂದ್ ವಿಚಾರವಾಗಿ ಸಾರ್ವಜನಿಕರಿಗೆ ಮಾಹಿತಿ ಇರಲಿಲ್ಲ. ಹೀಗಾಗಿ ರೋಗಿಗಳು ಚಿಕಿತ್ಸೆಗೆಂದು ದೂರದ ಊರುಗಳಿಂದ ಬಂದಿದ್ದು, ವೈದ್ಯರು ಸಿಗದೆ ಗೋಳಾಡುತ್ತಿದ್ದಾರೆ. ಆದರೆ ಇಂದು ನಿಮ್ಹಾನ್ಸ್ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ಇರಲಿಲ್ಲ. ಆದರೂ ಕೂಡ ಹಲವು ವೈದ್ಯರು ಕರ್ತವ್ಯಕ್ಕೆ ಬಂದಿಲ್ಲ. ಹೀಗಾಗಿ ಓಪಿಡಿ ಕ್ಲೋಸ್ ಆಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ಇಲ್ಲದೆ ದೂರದ ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಇತರೆ ನಗರಗಳಿಂದ ರೋಗಿಗಳು ಬಂದು ವೈದ್ಯರು ಸಿಗದೇ ರೋಗಿಗಳು ಕಂಗಲಾಗಿದ್ದಾರೆ. ಭಾನುವಾರ ತಡರಾತ್ರಿಯಿಂದ ವೈದ್ಯರಿಗಾಗಿ ರೋಗಿಗಳು ಕಾದು ಕುಳಿತಿದ್ದಾರೆ.ಅಷ್ಟೇ ಅಲ್ಲದೆ ಆಸ್ಪತ್ರೆ ಒಳಗಿರುವ ರೋಗಿಗಳಿಗೂ ಕೂಡ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ ಎಂದು ನಿಮ್ಹಾನ್ಸ್ ಆಸ್ಪತ್ರೆ ಬಳಿ ವೈದ್ಯರ ವಿರುದ್ಧ ರೋಗಿಗಳು ಹಾಗೂ ಅವರ ಸಂಬಂಧಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು, ವಯಸ್ಸಾದವರ ಗೋಳು ಕೇಳೋರಿಲ್ಲದಂತಾಗಿದೆ. ಹೀಗಾಗಿ ಚಿಕಿತ್ಸೆಗಾಗಿ ರೋಗಿಗಳು ಕಲ್ಲುಗಳ ಮೇಲೆ ಕಾದು ಕುಳಿತಿದ್ದಾರೆ. ಅಲ್ಲದೆ ವೈದ್ಯರೇ ಒಪ್ಪಿ ನಮಗೆ ಚಿಕಿತ್ಸೆ ಕೊಡಿ ಪ್ಲೀಸ್. ವೈದ್ಯೋ ನಾರಾಯಣ ಹರೇ ಎನ್ನುವುದನ್ನ ಮರೆಯಬೇಡಿ ಎಂದು ರೋಗಿಗಳು ಮನವಿ ಮಾಡಿಕೊಂಡಿದ್ದಾರೆ.ಚಿಕಿತ್ಸೆಗಾಗಿ ರೋಗಿಗಳು ನರಳುತ್ತಿದ್ದರೆ ಅತ್ತ ವೈದ್ಯರು ನಿಮ್ಹಾನ್ಸ್ ಆಸ್ಪತ್ರೆ ಆವರಣದಲ್ಲಿ ರ್ಯಾಲಿ ಮಾಡುತ್ತಿದ್ದಾರೆ. ಹೊರ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿರುವುದನ್ನ ನೋಡಿದರೂ, ನೋಡದಂತೆ ವೈದ್ಯರು ಹೋಗುತ್ತಿದ್ದಾರೆ. ಜೀವ ಅಮೂಲ್ಯವಾದದ್ದು, ರಕ್ಷಿಸಿ ಎಂದು ಬೋರ್ಡ್ ಹಿಡಿದು ವೈದ್ಯರು ರ್ಯಾಲಿ ನಡೆಸುತ್ತಿದ್ದು, ನಿರ್ದೇಶಕರ ಭೇಟಿ ಮಾಡಿ ಮನವಿ ನೀಡಿದ ನಂತರ ಇಂದು ಕೆಲಸ ಮಾಡಬೇಕಾ ಇಲ್ಲವಾ ಎಂದು ತೀರ್ಮಾನ ಮಾಡಲಾಗುತ್ತದೆ ಎನ್ನಲಾಗಿದೆ.Sign in to your account
Username or Email Address


Password

 Remember Me


