ರಾಯಚೂರು: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಈಗಾಗಲೇ ಘೋಷಣೆ ಮಾಡಿದೆ. ಅಲ್ಲದೆ ರೈತರಿಗೆ ಸಾಲ ಮನ್ನಾ ಬಗ್ಗೆ ಪತ್ರಗಳನ್ನೂ ನೀಡಿದೆ. ಆದರೆ ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಮಾತ್ರ ಬೆಳೆ ಸಾಲವನ್ನು ಸೆಟ್ಲ್ ಮೆಂಟ್ ಮಾಡಿಕೊಳ್ಳುವಂತೆ ಎಸ್‍ಬಿಐ ಬ್ಯಾಂಕ್ ರೈತರಿಗೆ ನೋಟಿಸ್ ನೀಡಿದೆ.ಜಿಲ್ಲೆಯ ಜಾಗೀರ್ ತಾಲೂಕಿನ ವೆಂಕಟಾಪುರ ಗ್ರಾಮದ ರೈತರಾದ ಭೀಮಣ್ಣ, ದೇವೇಂದ್ರಪ್ಪ, ಕೆ. ಶರಣಪ್ಪ, ನಾರಾಯಣಪ್ಪ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ರೈತರಿಗೆ ಬೆಳೆ ಸಾಲವನ್ನು ಒಂದೇ ಬಾರಿ ಕಂತಿನಲ್ಲಿ ಕಟ್ಟುವಂತೆ ಎಸ್‍ಬಿಐ ಕಲ್ಮಲಾ ಶಾಖೆ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಒಂದೆಡೆ ಭೀಕರ ಬರಗಾಲಕ್ಕೆ ತತ್ತರಿಸಿರುವ ರೈತರು ಈಗ ಬ್ಯಾಂಕ್ ನೋಟಿಸ್ ನಿಂದ ಕಂಗಾಲಾಗಿದ್ದಾರೆ.ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವುದಾಗಿ ಘೋಷಣೆ ಮಾಡಿದೆ. ಮುಖ್ಯಮಂತ್ರಿಯಿಂದ ರೈತರಿಗೆ ಸಾಂತ್ವಾನ ಪತ್ರಗಳು ಕೂಡ ಬಂದಿವೆ. ಆದರೆ ರಾಯಚೂರಿನಲ್ಲಿ ಒಂದೆಡೆ ಸರ್ಕಾರ ಸಾಲಮನ್ನಾ ಪತ್ರ ಕಳುಹಿಸಿದರೆ ಅದೇ ರೈತರಿಗೆ ಬ್ಯಾಂಕ್ ಸಾಲ ಕಟ್ಟಲು ನೋಟಿಸ್ ನೀಡಿದ್ದು ಅದಾಲತ್‍ಗೆ ಹಾಜರಾಗಿ ಒಂದೇ ಬಾರಿ ಉಳಿಕೆ ಎಲ್ಲಾ ಹಣವನ್ನು ಕಟ್ಟಬೇಕು ಎಂದು ಹೇಳಿದೆ. ಹೀಗಾಗಿ ಸರ್ಕಾರದಿಂದ ನಮ್ಮ ಸಾಲಮನ್ನಾ ಆಗಿದೆ ಎಂದುಕೊಂಡಿದ್ದ ರೈತ ಈಗ ಕಷ್ಟಪಡುವಂತೆ ಆಗಿದೆ.ಇದರ ಬಗ್ಗೆ ಬ್ಯಾಂಕ್‍ನವರನ್ನು ಕೇಳಿದರೆ “ಸಹಕಾರಿ ಬ್ಯಾಂಕ್‍ನಲ್ಲಿ ಸಾಲಮನ್ನಾ ಆದವರಿಗೆ ಮಾತ್ರ ನೋಟಿಸ್ ಕಳುಹಿಸಿದ್ದೇವೆ. ಒಂದು ವೇಳೆ ಬೇರೆ ರೈತರಿಗೆ ನೋಟಿಸ್ ಹೋಗಿದ್ದರೆ ಸಾಲಮನ್ನಾ ಆಗಿಯೂ ಉಳಿದ ಸಾಲವನ್ನು ಒಂದೇ ಬಾರಿ ಕಟ್ಟಲು ಅವಕಾಶ ನೀಡಿದ್ದೇವೆ. ಬಡ್ಡಿ ವಿನಾಯಿತಿ ನೀಡುತ್ತಿದ್ದೇವೆ” ಎಂದು ಹೇಳುತ್ತಾರೆ. ಆದರೆ ಮಳೆ ಬೆಳೆ ಇಲ್ಲದೆ ಸಂಕಷ್ಟಪಡುತ್ತಿರುವ ರೈತರು ಬ್ಯಾಂಕ್ ನೋಟಿಸ್ ವಿಚಲಿತರಾಗಿದ್ದು, ಯಾವುದೇ ಕಾರಣಕ್ಕೂ ಸಾಲ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.ಕಳೆದ ತಿಂಗಳ ಮೇ 18 ಹಾಗೂ 24 ರಂದು ನಡೆದ ಅದಾಲತ್‍ಗೆ ಭಾಗವಹಿಸುವಂತೆ ಬ್ಯಾಂಕ್ ನೋಟಿಸ್ ನೀಡಿತ್ತು. ಆದರೆ ಸರ್ಕಾರದಿಂದ ಸಾಲಮನ್ನಾ ಆಗುತ್ತೆ ಎಂಬ ಭರವಸೆಯಲ್ಲಿ ರೈತರು ಯಾರೂ ಸಾಲ ಕಟ್ಟುವ ಗೋಜಿಗೆ ಹೋಗಿರಲಿಲ್ಲ. ಈಗ ಮತ್ತೆ ನೊಟೀಸ್ ಬಂದಿರುವುದರಿಂದ ರೈತರು ಕಾಂಗಾಲಾಗಿದ್ದಾರೆ.Sign in to your account
Username or Email Address


Password

 Remember Me


