ದಾವಣಗೆರೆ: ಬಾರಿನಲ್ಲಿ ಮದ್ಯ ಸೇವಿಸುತ್ತಿದ್ದ ಸ್ನೇಹಿತರಿಬ್ಬರ ನಡುವೆ ಕ್ಷುಲಕ ಕಾರಣಕ್ಕೆ ಜಗಳ ಆರಂಭವಾಗಿ, ಯುವಕ ತನ್ನ ಸ್ನೇಹಿತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಯದೇವ ಸರ್ಕಲ್ ನಲ್ಲಿ ನಡೆದಿದೆ.ಇಲ್ಲಿನ ಮಧುಮಿತ್ರ ಬಾರಿನಲ್ಲಿ ಘಟನೆ ನಡೆದಿದ್ದು, ಸ್ನೇಹಿತರಾದ ಪ್ರತಾಪ್ ಹಾಗೂ ಅರುಣ್ ಇತರರೊಂದಿಗೆ ಕುಳಿತು ಮದ್ಯ ಸೇವಿಸಿದ್ದರು. ಈ ವೇಳೆ ಸ್ನೇಹಿತರ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಪ್ರತಾಪ್, ಅರುಣ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ದೃಶ್ಯಗಳು ಬಾರಿನಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯವಾಳಿಗಳಲ್ಲಿ ಸೆರೆಯಾಗಿದೆ.ದಾವಣಗೆರೆಯ ರಾಮನಗರ ನಿವಾಸಿ ಅರುಣ್ (29) ಕುಳಿತಿದ್ದ ವೇಳೆ ಹಿಂಬದಿಯಿಂದ ಬಂದ ಪ್ರತಾಪ್ ಚಾಕುವಿನಿಂದ ಕುತ್ತಿಗೆಗೆ ಸೀಳಲು ಮುಂದಾಗಿದ್ದಾನೆ. ಕ್ಷಣ ಮಾತ್ರದಲ್ಲಿ ಪ್ರತಾಪ್ ನಿಂದ ಚಾಕು ಕಸಿದುಕೊಂಡ ಅರುಣ್ ಕೂಡಲೇ ಬಾರಿನಿಂದ ಹೊರ ಬಂದಿದ್ದು, ಸ್ವತಃ ತಾನೇ ಆಟೋ ಓಡಿಸಿಕೊಂಡು ಹೋಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಅನಿರೀಕ್ಷಿವಾಗಿ ದಾಳಿ ನಡೆದರು ಸಮಯ ಪ್ರಜ್ಞೆಯಿಂದ ಬಹುವೇಗ ಆಸ್ಪತ್ರೆ ಸೇರಿದ ಅರುಣ್‍ಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವೈದ್ಯರು ಆತನ ಕುತ್ತಿಗೆಗೆ 15 ಹೊಲಿಗೆ ಹಾಕಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭಿಸಿದೆ.ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣದ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪ್ರತಾಪ್‍ನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


