ಧಾರವಾಡ: ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುವಂತಹ ಸ್ಥಿತಿ ಕುಮಾರಸ್ವಾಮಿ ಅವರದ್ದು ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಜಾಸ್ತಿ ಹಣ ಇದೆ ಎಂದು ಮೆಸೇಜ್ ಬರುತ್ತದೋ ಅಲ್ಲೆಲ್ಲ ಐಟಿ ದಾಳಿ ಆಗುತ್ತದೆ. ಬಿಜೆಪಿ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳ ಮನೆ ಮೇಲೂ ದಾಳಿ ಆಗಿದೆ ಎಂದು ಹೇಳಿದರು.ಚುನಾವಣೆಗೂ ಮುಂಚೆ ಜೆಡಿಎಸ್ ಪ್ರಮುಖರ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರದ್ದು ಕಳ್ಳನ ಜೀವ ಹುಳ್ಳುಳ್ಳಗೆ ಅನ್ನೋ ಪರಿಸ್ಥಿತಿ ಆಗಿದೆ. ಅವರು ಸರಿಯಾಗಿ ಇದ್ದಿದ್ದರೆ ಐಟಿ ದಾಳಿಗೆ ಏಕೆ ಹೆದರಬೇಕು? ನೀವು ಸರಿಯಾಗಿ ಇದ್ದರೆ ಐಟಿ ಅಧಿಕಾರಿಗಳು ಬರಲಿ ಬಿಡಿ ಎನ್ನಬೇಕಿತ್ತು. ನಿಮ್ಮ ಬಳಿ ಎಲ್ಲಾ ಸರಿ ಇರುವಾಗ ಯಾಕೆ ತೊಂದರೆ ಎನ್ನುತ್ತಿರಿ? ಹಾಗಾದರೆ ನಿಮ್ಮ ಮನೆಯಲ್ಲಿ ದುಡ್ಡು ಇದೆ. ಅದಕ್ಕೆ ನಿಮಗೆ ಹಾಗೆ ಅನಿಸುತ್ತಿದೆ ಎಂದು ವಾಗ್ದಾಳಿ ಮಾಡಿದರು.ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಬರ ಪರಿಹಾರದ ಕಾಮಗಾರಿಗಳು ನಡೆಯುತ್ತಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ನಿರ್ಮಾಣವಾಗಿದೆ. ಮಲೆನಾಡಿನ ಪ್ರದೇಶಗಳಲ್ಲಿಯೂ ನೀರಿನ ಅಭಾವ ಉಂಟಾಗಿದೆ. ರಾಜ್ಯ ಸರ್ಕಾರ ನಾಯಕರು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಪಕ್ಷದಲ್ಲಿರುವ ಬಂಡಾಯ ಶಮನ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ ಎಂದು ಮೈತ್ರಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆ ಮಾತನಾಡಿ, ಈ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಬೇಕು. ಜಿಂದಾಲ್‍ನವರು ಇಷ್ಟು ಭೂಮಿ ತೆಗೆದುಕೊಂಡು ಏನು ಮಾಡುತ್ತಾರೆ. ಮೈತ್ರಿ ಸರ್ಕಾರ ಕಮೀಷನ್ ಪಡೆದು ಟೆಂಡರ್‍ ಗಳನ್ನು ನೀಡುತ್ತಿದ್ದಾರೆ. ಟೆಂಡರ್ ಕರೆದು ಕಮೀಷನ್ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಮೋದಿ ಅವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಇಲ್ಲಿ ಇಷ್ಟು ಪ್ರಮಾಣದಲ್ಲಿ ನಿಮ್ಮದೇ ಮೈತ್ರಿ ಸರ್ಕಾರ ಲೂಟಿ ಮಾಡುತ್ತಿದೆ. ಈ ಬಗ್ಗೆ ರಾಹುಲ್ ಗಾಂಧಿ ಬಾಯಿ ತೆರೆಯಬೇಕು. ಈ ಬಗ್ಗೆ ನಾನು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಪತ್ರ ಬರೆಯುತ್ತೇನೆ ಅವರಿಂದ ಪ್ರತಿಕ್ರಿಯೆ ಕೇಳುವೆ ಎಂದು ಹೇಳಿದರು.Sign in to your account
Username or Email Address


Password

 Remember Me


