ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಎಮ್.ಆರ್.ಐ ಮತ್ತು ಸಿ.ಟಿ ಸ್ಕ್ಯಾನಿಂಗ್‍ಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ವೈದ್ಯರು ಎಮ್‍ಆರ್‍ಐ, ಸಿ.ಟಿ ಸ್ಕ್ಯಾನಿಂಗ್ ಮಾಡುತ್ತಾರೆ. ಆದರೆ ರಿಪೋರ್ಟ್ ನೀಡುವುದಿಲ್ಲ. ಕೇವಲ ಫಿಲಂ ನೋಡಿ ವೈದ್ಯರು ಚಿಕಿತ್ಸೆ ಕೊಡುತ್ತಾರೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಈ ನಿರ್ಲಕ್ಷ್ಯದಿಂದ ರೋಗಿಗಳು ಆತಂಕಗೊಂಡಿದ್ದಾರೆ.ಕಳೆದ ಐದು ದಿನದಿಂದ ಸಿ.ಟಿ.ಸ್ಕ್ಯಾನ್ ಮತ್ತು ಎಮ್.ಆರ್.ಐ ಸ್ಕ್ಯಾನ್‍ಗಳ ರಿಪೋರ್ಟ್ ಸಿಗುತ್ತಿಲ್ಲ. ವೈದ್ಯರು ಕೇವಲ ಸ್ಕ್ಯಾನ್ ಮಾಡಿ ನಂತರ ಸ್ಕ್ಯಾನ್ ಫಿಲಂ ನೋಡಿ ಚಿಕಿತ್ಸೆ ಕೊಡುವ ದುಃಸ್ಥಿತಿ ಬಂದಿದೆ. ಯಾಕೆ ಈ ಸಮಸ್ಯೆ ಎಂದು ಕೇಳಿದರೆ, ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಕೆಟ್ಟು ಹೋಗಿದ್ದರಿಂದ ರಿಪೋರ್ಟ್ ನೀಡಲು ಆಗುತ್ತಿಲ್ಲ ಎಂದು ಕ್ಷುಲ್ಲಕ ಕಾರಣವನ್ನು ವೈದ್ಯರು ನೀಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ 60 ಹೆಚ್ಚೂ ರೋಗಿಗಳಿಗೆ ರಿಪೋರ್ಟ್ ನೀಡದೇ ಕೇವಲ ಫಿಲಂ ನೋಡಿ ಚಿಕಿತ್ಸೆ ಕೊಡಲಾಗಿದೆ.ಕಳೆದ ನಾಲ್ಕು ದಿನದಿಂದ ಬ್ರಾಡ್‍ಬ್ಯಾಂಡ್ ಸಂಪರ್ಕ ಇಲ್ಲ ಅದರೂ ಸ್ಕ್ಯಾನಿಂಗ್ ಸೆಂಟರ್ ಸಿಬ್ಬಂದಿ ಸುಮ್ಮನೆ ಕೂತಿದ್ದಾರೆ. ಬಿಎಸ್‍ಎನ್‍ಎಲ್ ಕಚೇರಿಗೆ ಎರಡು ಬಾರಿ ಫೋನ್ ಮಾಡಿ ಕೈ ತೊಳೆದುಕೊಂಡಿದ್ದಾರೆ ಹೊರತು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ. ಕೆಲ ರೋಗಿಗಳು ರಿಪೋರ್ಟ್ ಇಲ್ಲದೆ ಚಿಕಿತ್ಸೆ ಪಡೆಯಲು ನಿರಾಕರಿಸಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇನ್ನೂ ಕೆಲವರು ವಿಧಿಯಿಲ್ಲದೆ ಫಿಲಂ ಮೂಲಕ ಚಿಕಿತ್ಸೆ ಪಡೆದು ಹೋಗಿದ್ದಾರೆ.ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟಾದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸಿದ ಪ್ರಸಂಗವೂ ನಡೆದಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತಕ್ಷಣ ಸರಿಪಡಿಸಿಕೊಳ್ಳದ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.Sign in to your account
Username or Email Address


Password

 Remember Me


