ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಭೇಟಿ ಮಾಡಿದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಆಗಮಿಸಿ ಅಲ್ಲಿಂದ ಸದಾಶಿವನಗರದ ಎಸ್‍ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಸುಧಾಕರ್ ಅವರು ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಬಿಎಸ್ ಯಡಿಯೂರಪ್ಪ ಅವರ ಭೇಟಿ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಯಡಿಯೂರಪ್ಪ ಅವರು, ರಮೇಶ್ ಜಾರಕಿಹೊಳಿ ಕೃಷ್ಣ ನಿವಾಸಕ್ಕೆ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಂದಿದ್ದು, ರಮೇಶ್ ಅವರು ಬಿಜೆಪಿಗೆ ಬರುವುದು ಅವರ ವೈಯಕ್ತಿಕ ವಿಚಾರ. ಇಲ್ಲಿ ಯಾವುದೇ ಕಾರ್ಯತಂತ್ರವನ್ನು ನಡೆಸಿಲ್ಲ ಇಲ್ಲ ಎಂದರು.ಮುಂದಿನ ವರ್ಷ ರಾಜೀನಾಮೆ:
ಎಸ್.ಎಂ ಕೃಷ್ಣ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನಾನು ಬಿಎಸ್‍ವೈರೊಂದಿಗೆ ಮಾತುಕತೆ ನಡೆಸಿಲ್ಲ. 1999 ರಲ್ಲಿ ಮೊದಲ ಬಾರಿಗೆ ನನ್ನನ್ನು ಶಾಸಕರಾಗಿ ಗೆಲ್ಲಿಸಿಕೊಂಡು ಬಂದಿದ್ದು ಕೃಷ್ಣ ಅವರು, ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಬಿಎಸ್‍ವೈ ಭೇಟಿ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ಅವರು ಬಂದಿದ್ದು ಕಾಕತಾಳೀಯ ಅಷ್ಟೇ ಎಂದರು. ಇದೇ ವೇಳೆ ಆಪರೇಷನ್ ಕಮಲ ಕುರಿತ ಪ್ರಶ್ನೆಗೆ ಉತ್ತರಿಸಿ, ಆಪರೇಷನ್ ಕಮಲಕ್ಕೂ ನನಗೂ ಸಂಬಂಧ ಇಲ್ಲ. ನನ್ನ ರಾಜೀನಾಮೆ ಹೇಳಿಕೆಗೆ ಬದ್ಧ ಆದರೆ 1 ವರ್ಷದ ಬಳಿಕ ರಾಜೀನಾಮೆ ನೀಡುತ್ತೇನೆ ಅದಕ್ಕೆ ಏನು ಮಾಡಬೇಕು ಎಂದು ಮಾಧ್ಯಮಗಳ ವಿರುದ್ಧ ಗರಂ ಆದ್ರ. ಮಾಧ್ಯಮಗಳಿಂದಲೇ ರಾಜೀನಾಮೆ ಗೊಂದಲ ಸೃಷ್ಟಿಯಾಗಿದೆ. ನೀವು ಸ್ಟಿಂಗ್ ಆಪರೇಷನ್ ಹೇಳಿ ಮಾಡಿದಂತೆ ನಾವು ಕೂಡಾ ಅಷ್ಟೇ? ಎಲ್ಲವನ್ನು ಮಾಧ್ಯಮಗಳಿಗೆ ಹೇಳಿ ಮಾಡಲು ಸಾಧ್ಯವಿಲ್ಲ ಎಂದರು.ಬಳಿಕ ಮಾತನಾಡಿದ ಶಾಸಕ ಸುಧಾಕರ್ ಅವರು, ನನ್ನ ರಾಜಕೀಯ ಗುರು ಎಸ್‍ಎಂಕೆ ಅವರು ಅವರನ್ನು ನೋಡಿ ನಾನು ರಾಜಕೀಯಕ್ಕೆ ಬಂದೆ. ಅವರ ಆರೋಗ್ಯ ವಿಚಾರ ಮಾಡಲು ಪ್ರತಿ ತಿಂಗಳು ಭೇಟಿ ನೀಡುತ್ತೇನೆ. ಇಂದು ರಮೇಶ್ ಅವರು ನನ್ನನ್ನು ಭೇಟಿ ಮಾಡಲು ಆಗಮಿಸಿದ್ದರು. ಆ ವೇಳೆ ನಾನು ಕೃಷ್ಣರನ್ನು ಭೇಟಿ ಮಾಡುವ ಬಗ್ಗೆ ಹೇಳಿದೆ. ಅವರು ನನ್ನ ಜೊತೆಗೆ ಆಗಮಿಸಿದರು. ಇದು ಸೌಜನ್ಯಯುತ ಭೇಟಿ ಅಷ್ಟೇ. ನಮಗೆ ಯಾವುದೇ ಅತೃಪ್ತಿ ಇಲ್ಲ. ಮಾಧ್ಯಮಗಳು ಇದನ್ನು ಹೇಗಾದರೂ ವಿಶ್ಲೇಷಣೆ ಮಾಡಬಹುದು, ನಾವು ರಾಜಕೀಯ ಚರ್ಚೆ ಮಾಡಿಲ್ಲ. ಬಿಎಸ್‍ವೈ ಕಾಣಿಸಿದಾಗ ಅವರ ಆರೋಗ್ಯ ಬಗ್ಗೆ ವಿಚಾರಿಸಿದೆ ಎಂದರು.Sign in to your account
Username or Email Address


Password

 Remember Me


