ಚಿಕ್ಕಮಗಳೂರು: ಮಗನ ರಾಜಕೀಯ ಭವಿಷ್ಯಕ್ಕಾಗಿ ರಾಜ್ಯಾದ್ಯಂತ ಟೆಂಪಲ್ ರನ್ ಮಾಡಿ, ಶೃಂಗೇರಿಯಲ್ಲಿ ಪೂಜೆ, ಹೋಮ, ಹವನ ನಡೆಸಿದ್ದ ಸಿ.ಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮತ್ತೊಂದು ಸುತ್ತು ಟೆಂಪಲ್ ರನ್ ಮುಂದುವರಿಸಿದೆ. ಇಂದು ಬೆಳಗ್ಗೆ ಶೃಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್, ಸಂಜೆ ಹಾಸನದ ಕುಲದೇವರ ಸೇರಿದಂತೆ ವಿವಿಧ ದೇವಸ್ಥಾನಕ್ಕೆ ತೆರಳಿ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ತಾಯಿ- ಮಗ, ಎಕ್ಸಿಟ್ ಪೋಲ್‍ಗಳನ್ನ ಲೆಕ್ಕಕ್ಕೆ ಇಟ್ಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ರು.ದೇಶಾದ್ಯಂತ 543 ಕ್ಷೇತ್ರದಲ್ಲಿ ಚುನಾವಣೆ ನಡೆದರೂ ಇಂಡಿಯಾ ಕಣ್ಣು ಮಂಡ್ಯದ ಮೇಲಿರೋದ್ರಲ್ಲಿ ಅನುಮಾನವೇ ಇಲ್ಲ. ಅತ್ತ ಸುಮಲತಾ ಇತ್ತ ನಿಖಿಲ್ ಕುಮಾರಸ್ವಾಮಿಯ ಎದೆಯಲ್ಲೂ ಢವ-ಢವ ಶುರುವಾಗಿದೆ. ಆದರೆ, ಅಪ್ಪನಿಗೆ ಅಧಿಕಾರ ಕೊಟ್ಟ ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಗನ ಗೆಲುವಿಗಾಗೂ ವಿಶೇಷ ಪೂಜೆ ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಫಲಿತಾಂಶಕ್ಕೂ ಮುನ್ನ ಮಗನ ಗೆಲುವಿಗಾಗಿ ಮತ್ತೆ ಶಾರದಾಂಬೆಯ ಮೊರೆ ಹೋಗಿದ್ದಾರೆ.ಇದೇ ವೇಳೆ ಮಾತನಾಡಿದ ನಿಖಿಲ್, ಒಂದೊಂದು ಸರ್ವೆಗಳಲ್ಲಿ ಒಂದೊಂದು ರೀತಿ ಫಲಿತಾಂಶ ಬಂದಿದೆ. ನಾನು ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಶಾರದಾಂಬೆ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಿಎಂ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಶಾರದಾಂಬೆಯ ಆಶೀರ್ವಾದಕ್ಕಾಗಿ ನಾವು ಆಗಾಗ ಶೃಂಗೇರಿಗೆ ಬರುತ್ತೇವೆ. ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ಸರ್ಕಾರಕ್ಕೆ ಡೆಡ್‍ಲೈನ್ ಕೊಡ್ತಾನೆ ಇದೆ. ಆದರೆ ಏನೂ ಪ್ರಯೋಜನವಾಗ್ತಿಲ್ಲ. ಸರ್ಕಾರ ಪತನಗೊಳಿಸುವ ಅವರ ಆಸೆ ಈಡೇರೋದಿಲ್ಲ. ರಾಜ್ಯದಲ್ಲಿ ಜೆಡಿಎಸ್‍ಗೆ ಆರು ಸ್ಥಾನ ಬರುವ ನಿರೀಕ್ಷೆ ಇದೆ. ನಿಖಿಲ್ ಮೇಲೆ ಚಾಮುಂಡೇಶ್ವರಿ, ಶಾರದಾಂಬೆ ಹಾಗೂ ಜನರ ಆಶೀರ್ವಾದವಿದೆ ಎಂದು ಹೇಳುವ ಮೂಲಕ ನಿಖಿಲ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.ಒಟ್ಟಿನಲ್ಲಿ 2018 ಜನವರಿ ತಿಂಗಳಿಂದ ಸಿಎಂ ರಾಜ್ಯ ಸುತ್ತಿದ್ದಕ್ಕಿಂತ ಅಧಿಕಾರ ಉಳಿಸಿಕೊಳ್ಳೋದಕ್ಕೆ ಮಠ-ಮಂದಿರ ಸುತ್ತಿದ್ದೇ ಹೆಚ್ಚು. ಸಿಎಂ ನಡೆ ಬಗ್ಗೆ ರಾಜ್ಯದ ಜನ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಮಗನ ರಾಜಕೀಯ ಭವಿಷ್ಯಕ್ಕೂ ಅಷ್ಟೇ ಪ್ರಮಾಣದಲ್ಲಿ ದೇವಸ್ಥಾನ, ವಿಶೇಷ ಪೂಜೆ, ಹೋಮ-ಹವನ ನಡೆಸಿದ್ದ ಸಿಎಂ ಕುಟುಂಬ, ಈಗ ಫಲಿತಾಂಶಕ್ಕೂ ಮುನ್ನ ಮತ್ತೊಂದು ರೌಂಡ್ ಶುರುಮಾಡಿದ್ದಾರೆ.






 Advertisement 




Sign in to your account
Username or Email Address


Password

 Remember Me


