ಮೈಸೂರು: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಅಪ್ರಾಪ್ತ ಬಾಲಕಿಯ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಶಾಲೆಗೆ ಹೋಗಲು ಸಿದ್ಧವಾಗುತ್ತಿದ್ದ ಬಾಲಕಿ ಚಿಕ್ಕಮ್ಮನ ನೀಚಕೃತ್ಯಕ್ಕೆ ಬಲಿಯಾಗಿದ್ದಾಳೆ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.ನವೆಂಬರ್ 16 ರಂದು ಜಿಲ್ಲೆಯ ನಂಜನಗೂಡು ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಬಾಲಕಿ ಐಶ್ವರ್ಯಳನ್ನು ಕೊಲೆ ಮಾಡಲಾಗಿತ್ತು. ಬಾಲಕಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐಶ್ವರ್ಯಳ ಚಿಕ್ಕಮ್ಮ ರಾಜಮ್ಮ, ಪ್ರಿಯಕರ ಸಿದ್ದರಾಜುರನ್ನ ಬಂಧಿಸಿದ್ದಾರೆ.ಏನಿದು ಪ್ರಕರಣ?
ನವೆಂಬರ್ 16 ರಂದು ಕೊಲೆ ಮಾಡಲಾಗಿತ್ತು. ಬಾಲಕಿಯ ತಂದೆ, ತಾಯಿ ತಳ್ಳು ಗಾಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಗುಡಿಸಲಿನಲ್ಲಿ ವಾಸವಿದ್ದ ಕುಟುಂಬದಲ್ಲಿ ಬಾಲಕಿ 8ನೇ ತರಗತಿ ಓದುತ್ತಿದ್ದಳು. ಆದರೆ ಅಂದು ಗುಡಿಸಲಿನಲ್ಲಿ ಒಬ್ಬಳೇ ಇದ್ದ ಬಾಲಕಿಯನ್ನು ಅಂದು ಕೊಲೆ ಮಾಡಲಾಗಿತ್ತು. ಬಾಲಕಿಯ ತಂದೆ ಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.ಕೊಲೆಗೆ ಕಾರಣವೇನು:
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಬಾಲಕಿಯೊಂದಿಗೆ ಇದ್ದ ರಾಜಮ್ಮ ಮೇಲೆ ಶಂಕೆ ವ್ಯಕ್ತಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೊಲೆ ಹಿಂದಿನ ಕಾರಣ ಬೆಳಕಿಗೆ ಬಂದಿದೆ. ರಾಜಮ್ಮ, ಸಿದ್ದರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಅಂದು ಐಶ್ವರ್ಯ ಕುಟುಂಬ ವಾಸವಿದ್ದ ಗುಡಿಸಲಿನ ಹಿಂಭಾಗದಲ್ಲಿ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದರು. ಆದರೆ ಇದನ್ನು ಐಶ್ವರ್ಯ ಆಕಸ್ಮಾತ್ ಆಗಿ ನೋಡಿದ್ದಳು. ಅಕ್ರಮ ಸಂಬಂಧದ ವಿಚಾರವನ್ನು ಐಶ್ವರ್ಯ ಎಲ್ಲರಿಗೂ ಹೇಳಿ ಬಿಡುತ್ತಾಳೆ ಎಂದು ಹೆದರಿದ ರಾಜಮ್ಮ, ಪ್ರೇಮಿ ಸಿದ್ದರಾಜು ಜೊತೆ ಸೇರಿ ಐಶ್ವರ್ಯಳ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ರಾಜಮ್ಮ ತನಗೆ ಏನು ಗೊತ್ತೇ ಇಲ್ಲದಂತೆ ಐಶ್ವರ್ಯ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಿದ್ದಳು.ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸರು ಬಾಲಕಿ ಮೇಲೆ ಅತ್ಯಾಚಾರ ಆಗಿದೆಯೋ ಇಲ್ಲವೋ ಎಂಬುದು ವೈದ್ಯಕೀಯ ವರದಿ ಬಂದ ನಂತರ ಸ್ಪಷ್ಟವಾಗಲಿದೆ. ಸದ್ಯಕ್ಕೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


