ಬೆಳಗಾವಿ: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದ ರೈತರನ್ನು ಗೂಂಡಾಗಳು ಎಂದು ಕರೆದಿದ್ದ ಸಿಎಂ ಕುಮಾರಸ್ವಾಮಿ ಅವರು ಆಡಿದ್ದ ಮಾತಿನ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ರೈತ ಹೋರಾಟಗಾರ ಅಶೋಕ್ ಅವರು, ನಾನು ರೈತ ಸಂಘ ಸೇರುವ ಮೊದಲು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದೆ. ಆದರೆ ರೈತರಿಗೆ ರಾಜಕೀಯ ಪಕ್ಷಗಳಿಂದ ಸರಿಯಾದ ಬೆಂಬಲ ಸಿಗದ ಕಾರಣ ರಾಜಕೀಯ ಪಕ್ಷ ತೊರೆದು ರೈತ ಸಂಘ ಸೇರಿದೆ. ಆದ್ದರಿಂದ ಮುಖ್ಯಮಂತ್ರಿಗಳು ನನ್ನ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ಅವರ ಮಾತಿನ ಶೈಲಿ ಅವರಿಗೆ ಪ್ರಿಯವಾಗಬೇಕು. ನಾನು ರೈತನೇ ಅಲ್ಲ ಎನ್ನುವುದಾರೆ ದಾಖಲೆ ಪರಿಶೀಲನೆ ನಡೆಸಲಿ. 2010ರ ಬಳಿಕ ನಾನು ಪ್ರತಿವರ್ಷ ಕಾರ್ಖಾನೆಗೆ ಕಬ್ಬು ನೀಡಿದ್ದಾಗಿ ತಿಳಿಸಿದ್ದಾರೆ.ನಾನು ಈ ಹಿಂದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸಿಎಂ ನನಗೆ ಮೊದಲಿನಿಂದಲೂ ತುಂಬಾ ಪರಿಚಯ. ಅವರು ನಮ್ಮ ಮನೆಗೂ ಒಮ್ಮೆ ಭೇಟಿ ಕೂಡ ನೀಡಿದ್ದರು. ಆದರೆ ನಾನು ಜೆಡಿಎಸ್ ಪಕ್ಷದಿಂದ ಹೊರ ಬಂದು ರೈತ ಸಂಘ ಸೇರಿದೆ. ಹೀಗಾಗಿ ಸಿಎಂ ಅವರು ಈ ರೀತಿ ಆರೋಪ ಮಾಡಿರಬಹುದು ಎಂದು ಅಶೋಕ್ ಹೇಳಿದರು.ರೈತರಿಗೆ ಪಾವತಿ ಆಗಬೇಕಾದ ಹಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದ ಕಾರಣ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವು. ಆದರೆ ರಸ್ತೆಗಿಳಿದು ಹೋರಾಟ ನಡೆಸಲು ಮುಂದಾದರೆ ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಅದ್ದರಿಂದ ಸುವರ್ಣ ಸೌಧದ ಮುಂದೆಯೇ ಹೋರಾಟ ನಡೆಸಲು ಮುಂದಾಗಿದ್ದೇವು. ಈ ವೇಳೆ ಪೊಲೀಸರು ಅಡ್ಡಿಪಡಿಸಿದ ಕಾರಣ ಅನಿವಾರ್ಯವಾಗಿ ಬೀಗ ಮುರಿದು ಒಳಹೋಗುವ ಪ್ರಯತ್ನ ನಡೆಸಲಾಯಿತು. ನಮ್ಮ ಹೋರಾಟ ಕೇವಲ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಸಿಎಂ ಕುಮಾರಸ್ವಾಮಿ ಅವರೊಂದಿಗೆ ಮಂಗಳವಾರ ನಡೆದ ಸಭೆ ಯಶಸ್ವಿಯಾಗಿಲ್ಲ. ಸುಪ್ರೀಂ ಕೋರ್ಟ್ ರೈತರಿಗೆ 15 ದಿನಗಳಲ್ಲಿ ಬಿಲ್ ನೀಡಲು ಸೂಚನೆ ನೀಡಿದೆ. ಆದರೆ ಕಾರ್ಖಾನೆ ಮಾಲೀಕರು ನ್ಯಾಯಾಲಯ ಸೂಚನೆ ಅನುಸರಿಸುತ್ತಿಲ್ಲ. ಅದ್ದರಿಂದ ನಮ್ಮ ಹೋರಾಟ ಮುಂದುವರಿಸುತ್ತೇವೆ. ಮುಂದಿನ ಚಳಿಗಾಲದ ಅಧಿವೇಶನದಲ್ಲೂ ನಮ್ಮ ಹೋರಾಟ ಮುಂದುವರಿಯುತ್ತದೆ. ಸರ್ಕಾರವೇ ರೈತರ ಪರ ನಿರ್ಣಯ ಕೈಗೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಬೇಕಿದೆ ಎಂದು ಮನವಿ ಮಾಡಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


