ಚಿಕ್ಕಮಗಳೂರು: ದೇಶದ ಒಂದೊಂದು ಹಬ್ಬಗಳು ಒಂದೊಂದು ದಿನ ಬಂದರೆ ಕಾಫಿನಾಡಿಗರಿಗೆ ಮಾತ್ರ ಆ ಎಲ್ಲಾ ಹಬ್ಬಗಳು ಒಂದೇ ದಿನ ಬರುತ್ತವೆ. ಕಾಫಿನಾಡಿನ ಎಸ್‍ಟಿಜೆ ಕಾಲೇಜು ವಿದ್ಯಾರ್ಥಿನಿಯರು ಆಚರಿಸಿದ ಪರಂಪರಾ ದಿನದ ಆಚರಣೆ ಆಧುನಿಕ ಭಾರತದಲ್ಲಿ ಮರೆಯಾಗುತ್ತಿರುವ ಸಂಪ್ರದಾಯದ ಉಳಿವಿಗೆ ಸಾಕ್ಷಿಯಾಗಿತ್ತು.ಬಣ್ಣ-ಬಣ್ಣದ ಸೀರೆಯುಟ್ಟ ನಾರಿಯರು, ಸ್ಟೈಲಾಗಿ ಜೀನ್ಸ್-ಟೀ ಶರ್ಟ್ ತೊಟ್ಟ ಯುವತಿಯರು, ಮುತ್ತೈದೆಯಂತೆ ಮೈತುಂಬಾ ಸೆರಗೊದ್ದು ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸುತ್ತಿರುವ ಹುಡುಗಿಯರು, ಮಲೆಯಾಳಿ ಕುಟ್ಟಿಗಳಂತೆ ಬಾರ್ಡರ್ ನ ಬಿಳಿ ಸೀರೆಯುಟ್ಟು ಸೆಲ್ಫಿ ಕ್ಲಿಕ್ಕಿಸುತ್ತಿರುವ ಸುಂದರಿಯರು. ಕಿರೀಟ ತೊಟ್ಟು, ಕೈಯಲ್ಲಿ ತ್ರಿಶೂಲ ಇಟ್ಕೊಂಡು ದುರ್ಗೆಯರಾಗಿರೋ ಯುವತಿಯರು, ಇವರೆಲ್ಲಾ ಚಿಕ್ಕಮಗಳೂರಿನ ಎಸ್‍ಟಿಜೆ ಕಾಲೇಜಿನಲ್ಲಿ ಕಂಡು ಬಂದರು.ವಿದ್ಯಾರ್ಥಿನಿಯರು ಪ್ರತಿ ವರ್ಷ ಪರಂಪರಾ ದಿನದ ಅಂಗವಾಗಿ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಕೃತಿಯನ್ನ ಸಾರುವಂತಹ ಕಾರ್ಯಕ್ರಮವನ್ನ ಆಚರಿಸುತ್ತಾರೆ. ಈ ಬಾರಿ ಕೃಷ್ಣ ಜನ್ಮಾಷ್ಟಮಿ, ಹೋಳಿ ಹುಣ್ಣಿಮೆ, ನವದುರ್ಗೆಯರ ವೈಭವ, ಪರಿಸರ ಉಳಿಸಿ-ದೇಶ ರಕ್ಷಿಸಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ಹಬ್ಬಗಳನ್ನ ಆಚರಿಸಿದ್ದಾರೆ. ಜೊತೆಗೆ ಕೃಷಿ ಮೇಳ, ಹಳ್ಳಿಸೊಗಡಿನ ಜೀವನ ಶೈಲಿ, ಹಳ್ಳಿಗಳ ಸಂಪ್ರದಾಯಗಳೆಲ್ಲವೂ ಅಲ್ಲಿದ್ದವು. ಅಷ್ಟೇ ಅಲ್ಲದೇ ಹಿಂದೂ, ಮುಸ್ಲಿಂ ಎಂಬ ಭಾವವಿಲ್ಲದೆ ಒಟ್ಟಾಗಿ ಸೇರಿ ಆಚರಣೆ ಮಾಡಿದ್ದಾರೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಫಲಿತಾಂಶಕ್ಕಾಗಿ ಪೋಷಕರು, ಉಪನ್ಯಾಸಕರು ಓದಿನ ಮೇಲೆ ಒತ್ತಡ ಹಾಕುತ್ತಾರೆ. ಆದರೆ ಇಲ್ಲಿನ ಉಪನ್ಯಾಸಕರು ಓದಿನ ಜೊತೆ ರೂಢಿ-ಸಂಪ್ರದಾಯ ಉಳಿಸೋಕು ಹೆಗಲು ಕೊಟ್ಟಿದ್ದಾರೆ. ವರ್ಷಪೂರ್ತಿ ಕಾಲೇಜು, ಓದು, ಮನೆ ಎನ್ನುವ ವಿದ್ಯಾರ್ಥಿನಿಯರು ಮನೋರಂಜನೆ ಜೊತೆ ಅವರೇ ಇಷ್ಟ ಪಟ್ಟು ನಡೆಸುವ ಇಂತಹ ಸಂಸ್ಕೃತಿ ಹಬ್ಬಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರ ಬೆಂಬಲವಿದೆ.ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ವರ್ಷ ಈ ರೀತಿಯ ಒಂದೊಂದು ವಿಭಿನ್ನ ರೀತಿಯ ಆಚರಣೆಯಿಂದ ನಾವು ಸಂಭ್ರಮಿಸುತ್ತೇವೆ. ಜೊತೆಗೆ ಭಾರತೀಯ ಸಂಸ್ಕೃತಿಯನ್ನ ಕಾಲೇಜಿನ ವಿದ್ಯಾರ್ಥಿನಿಯರು ಉಳಿಸಿ, ಬೆಳೆಸುತ್ತಿದ್ದಾರೆ. ನಾಡಿನ ಸಂಸ್ಕೃತಿಯ ಬಗ್ಗೆ ತಮ್ಮ ಮಕ್ಕಳಿಗಿರುವ ಗೌರವನ್ನ ಕಂಡು ಕಾಲೇಜಿನ ಉಪನ್ಯಾಸಕರೆಲ್ಲರೂ ಕೂಡ ಮಕ್ಕಳೊಂದಿಗೆ ಸೇರಿ ಮಕ್ಕಳಾಗಿದ್ದರು ಎಂದು ಪ್ರಾಂಶುಪಾಲರಾದ ಭಾರತಿ ಹೇಳಿದ್ದಾರೆ.






 Advertisement 




Sign in to your account
Username or Email Address


Password

 Remember Me


