ಉಡುಪಿ: ಚಿಕ್ಕ ವಯಸ್ಸಿನಲ್ಲೇ ಪಟ್ಟ ಒಲಿದು ಬಂದಿದೆ. ಧೈರ್ಯದಿಂದ ಮುಂದೆ ಸಾಗು, ನಿನ್ನ ಹಿಂದೆ ನಾನಿದ್ದೇನೆ. ಯಾವುದೇ ಭಯ ಬೇಡ. ನಿನಗೆ ನನ್ನ ಅಭಯ ಹಸ್ತವಿದೆ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಬ್ರಹ್ಮ ಬೈದರ್ಕಳ ಮತ್ತು ಶಿವರಾಯ ದೈವಗಳು ಅಭಯ ನೀಡಿವೆ.ಜಿಲ್ಲೆಯ ಕಾರ್ಕಳ ತಾಲೂಕಿನ ತಿಂಗಳೆ ಗ್ರಾಮದಲ್ಲಿ ವರ್ಷಾವಧಿ ದೈವದ ನೇಮೋತ್ಸವ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಕರಾವಳಿಯ ದೈವಾರಾಧನೆಯಲ್ಲಿ ಮೈಸೂರು ಮಹಾರಾಜ ಯದುವೀರ್ ಒಡೆಯರ್ ಅವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ್ರು.ಬಿರುದಾವಳಿಗಳಿಂದ ಮಹಾರಾಜರನ್ನು ಮೆರವಣಿಗೆ ಮೂಲಕ ದೈವದ ಗರಡಿಗೆ ಕರೆದುಕೊಂಡು ಬಂದ ಆಡಳಿತ ಮಂಡಳಿಯವರು, ದೈವದ ದರ್ಶನ ಮಾಡಿಸಿದರು. ಬ್ರಹ್ಮ ಬೈದರ್ಕಳ ಮತ್ತು ಶಿವರಾಯ ದೈವದ ಗುಡಿಗಳಿಗೆ ಭೇಟಿ ಕೊಟ್ಟ ಮಹಾರಾಜರು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೈಸೂರು ಮಹಾರಾಜರನ್ನು ನೋಡಲು ದೂರ ದೂರದ ಗ್ರಾಮಗಳಿಂದ ಜನ ಸಮುದಾಯವೇ ಹರಿದುಬಂತು.ಬ್ರಹ್ಮ ಬೈದರ್ಕಳ ದೈವನ ನೇಮೋತ್ಸವ ನಡೆಯುತ್ತಿದ್ದಂತೆ ಯದುವೀರ್ ಧರ್ಮ ಚಾವಡಿಗೆ ಆಗಮಿಸಿದರು. ಸುಮಾರು ಒಂದು ಗಂಟೆಗಳ ಕಾಲ ನರ್ತನ ಸೇವೆ ನಡೆಯನ್ನು ನೋಡಿದರು. ನಂತರ ಅಬ್ಬರದ ಶಿವರಾಯ ದೈವದ ಕೋಲ ಆರಂಭವಾಯ್ತು. ಶಿವರಾಯ ದೈವ 12 ದೀವಟಿಗೆ ಹಿಡಿದು ಅಬ್ಬರದ ಗಗ್ಗರ ಸೇವೆ ನಡೆಯಿತು. ನಂತರ ಮಹಾರಾಜರು ದೈವದ ಕೈಯ್ಯಿಂದ ಪ್ರಸಾದ ಸ್ವೀಕರಿಸಿದ್ರು.ಈ ವೇಳೆ ಶಿವರಾಯ ದೈವ ಮಹಾರಾಜರಿಗೆ ಅಭಯದ ನುಡಿ ಕೊಟ್ಟಿದೆ. ಚಿಕ್ಕ ಪ್ರಾಯದಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿದೆ. ನಿನ್ನ ಬೆನ್ನ ಹಿಂದೆ ನಿಂತು ಎಲ್ಲಾ ಕೆಲಸ ಕಾರ್ಯಗಳಿಗೆ ಸಹಾಯ ಮಾಡುತ್ತೇನೆ. ಭಯ ಬೇಡವೆಂದು ನುಡಿದಿದೆ. ಇನ್ನು ನಕ್ಸಲ್ ಪೀಡಿತ ಪ್ರದೇಶದಲ್ಲಿ ಓಡಾಡಿದ ಯದುವೀರ್ ಮಹಾರಾಜ್ ಗೆ ಹೆಚ್ಚಿನ ಭಧ್ರತೆಯನ್ನು ಪೊಲೀಸರು ನೀಡಿದ್ದರು.ಬಳಿಕ ಮಾತನಾಡಿದ ಯದುವೀರ್ ಅವರು, ಕರಾವಳಿಯ ಕಲೆ ಸಂಸ್ಕೃತಿಯ ಮೊದಲ ಅನುಭವವಾಗಿದೆ. ದೈವ ಶಕ್ತಿಯ ಬಗ್ಗೆ ಗೊತ್ತೇ ಇರಲಿಲ್ಲ. ಆವಾಹನೆ, ನರ್ತನ ನೋಡಿ ವಿಭಿನ್ನ ಆಚರಣೆ ಅನ್ನಿಸಿತು. ಬಹಳ ಪರಂಪರೆಗಳು ಕರ್ನಾಟಕದಲ್ಲಿ ಇದೆ. ಎಲ್ಲಾ ಸಂಸ್ಕೃತಿಯ ಪರಿಚಯ ಎಲ್ಲರಿಗೂ ಆಗಬೇಕಿದೆ. ಇಲ್ಲಿನ ಜನ, ಆಚರಣೆ ಬಹಳ ಇಷ್ಟವಾಗಿದೆ ಅಂದ್ರು.Sign in to your account
Username or Email Address


Password

 Remember Me


