ಚಿಕ್ಕಮಗಳೂರು: ಜಿಲ್ಲೆಯನ್ನ ಅಭಿವೃದ್ಧಿಪಡಿಸೋ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೋರಿದ್ದ ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆಯ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದೆ.ಜಿ.ಪಂ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಪ್ರಧಾನಿ ಮೋದಿ ಭೇಟಿಯ ಅವಕಾಶಕ್ಕಾಗಿ ಕೋರಿ ಪತ್ರ ಬರೆದಿದ್ದರು. ಇದೀಗ ಇವರ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು, ಭೇಟಿ ದಿನಾಂಕ ಹಾಗೂ ಸಮಯ ಇನ್ನಷ್ಟೆ ನಿಗದಿಯಾಗಬೇಕಿದೆ. ಪತ್ರಕ್ಕೆ ಸ್ಪಂದನೆ ದೊರೆತಿರೋದು ಚೈತ್ರಶ್ರೀ ಅವರಿಗೆ ಸಂತಸ ತಂದಿದೆ. ತಳ ಸಮುದಾಯದಿಂದ ಬಂದು, ವಿದ್ಯಾವಂತೆಯಾಗಿ ಸಣ್ಣ ವಯಸ್ಸಿನಲ್ಲೇ ಜಿ.ಪಂ ಅಧ್ಯಕ್ಷೆ ಸ್ಥಾನದಂತಹ ಮಹತ್ವದ ಹುದ್ದೇಗೇರಿದ ಸಾಧನೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ವಾರದ ಹಿಂದಷ್ಟೇ ಕರೆ ಬಂದಿದೆ.ಪ್ರಧಾನಿ ಮೋದಿ ಅವರ ಆಪ್ತ ಸಹಾಯಕರು ಕರೆ ಮಾಡಿ ಚೈತ್ರಶ್ರೀ ಬರೆದಿದ್ದ ಪತ್ರದ ಬಗ್ಗೆ ಚರ್ಚಿಸಿದ್ದಾರೆ. ಸದ್ಯಕ್ಕೆ ಪ್ರಧಾನಿಯವರಿಗೆ ಬಿಡುವಿಲ್ಲದ ಕಾರಣ ಶ್ರೀಘ್ರದಲ್ಲೇ ಪ್ರಧಾನಿಯೊಂದಿಗೆ ಮಾತುಕತೆಗೆ ಸಮಯ ನಿಗದಿ ಮಾಡಲಾಗುವುದು ಎಂದು ಮೋದಿ ಆಪ್ತ ಸಹಾಯಕರು ಕರೆ ಮಾಡಿದ್ದಾಗ ತಿಳಿಸಿದ್ದಾರೆ. ಬಿಜೆಪಿಯ ಆಂತರಿಕ ಒಪ್ಪಂದದಂತೆ ಜಿ.ಪಂ ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳು ಚೈತ್ರಶ್ರೀ ಕೆಳಗಿಳಿಯಬೇಕಿತ್ತು. ಆದ್ರೆ ಚೈತ್ರಶ್ರೀ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡದೆ ಹಠ ಮಾಡಿ ಜಿಲ್ಲಾ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರೋ ಬೆನ್ನಲ್ಲೇ ಮೋದಿ ಭೇಟಿಗೆ ಕರೆ ಬಂದಿರೋದು ಚೈತ್ರಶ್ರೀ ಗೆ ಸಂತಸ ತಂದಿದೆ.ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಚೃತ್ರಶ್ರೀ, ನನಗೆ ತುಂಬಾ ಖುಷಿಯಾಗಿದೆ. ಮೋದಿ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಚಿಕ್ಕಮಗಳೂರಿನಲ್ಲಿ ಅಲೆಮಾರಿ ಜನಾಂಗವಾದ ‘ಸುಡುಗಾಡು ಸಿದ್ದ’ ಎಂಬ ತುಂಬಾ ಹಿಂದುಳಿದ ಸಮುದಾಯದಲ್ಲಿ ಹುಟ್ಟಿದ್ದೇನೆ. ಜಿ.ಪಂ ಅಧ್ಯೆಕ್ಷೆಯಾಗಿ ಅಭಿವೃದ್ಧಿ ಕಾರ್ಯಗಳನ್ನ ಮಾಡಬೇಕೆಂಬ ಉದ್ದೇಶದಿಂದ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು.ಜಿಲ್ಲೆಯಲ್ಲಿ ಪೆಪ್ಪರ್ ಪಾರ್ಕ್, ವುಡ್ ಪಾರ್ಕ್ ಮಾಡಬೇಕು, ಮಕ್ಕಳ ಶೈಕ್ಷಿಣಿಕ ಗುಣಮಟ್ಟ ಹೆಚ್ಚಿಸಬೇಕು, ಶೌಚಾಲಯ- ಕಟ್ಟಡ ಅಭಿವೃದ್ಧಿಗೆ ಅನುದಾನ ಬೇಕು. ಜಿ.ಪಂ ಅಧ್ಯಕ್ಷರಾಗಿ ಇದುವರೆಗೂ ಯಾರೂ ಗ್ರಾಮ ವಾಸ್ತವ್ಯ ಮಾಡಿರಲಿಲ್ಲ. ನಮ್ಮ ಜಿಲ್ಲೆಯಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಮೂಡಿಗೆರೆ ತಾಲೂಕು ಕಳಸಾ ಹೋಬಳಿ ಸಂಸೆ ಗ್ರಾ.ಪಂ ವ್ಯಾಪ್ತಿಯಲ್ಲಿ ಜೋಗಿ ಕುಂಬ್ರಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೆ. ಅದು ನಕ್ಸಲೈಟ್‍ಗಳಿರುವ ತುಂಬಾ ಹಿಂದುಳಿದ ಗ್ರಾಮ. ಅಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಹಲವಾರು ಸಮಸ್ಯೆ ಆ ಭಾಗದಲ್ಲಿ ಇರೋದ್ರಿಂದ ಆ ಉದ್ದೇಶ ಇಟ್ಟುಕೊಂಡು ಹಾಗೂ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ಕೋರಿದ್ದೇನೆ ಎಂದು ಚೈತ್ರಶ್ರೀ ಹೇಳಿದ್ರು. Sign in to your account
Username or Email Address


Password

 Remember Me


