ತುಮಕೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪರಿಚಿತ ಬಾಲಕನೋರ್ವ ಅಪಾಯಕಾರಿ ದ್ರಾವಣ ಎರಚಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.ಘಟನೆಯಲ್ಲಿ ಸಹೋದರರಾದ 11 ವರ್ಷದ ದರ್ಶನ್ ಹಾಗೂ 4 ವರ್ಷದ ವಿನಯ್ ಗಾಯಗೊಂಡಿದ್ದಾರೆ. ತಿಪಟೂರು ನಗರದ ಕೆ.ಆರ್.ಬಡಾವಣೆಯ ಬಯಲು ರಂಗಮಂದಿರದಲ್ಲಿ ಇಬ್ಬರು ಸಹೋದರರು ಆಡುತ್ತಿದ್ದಾಗ ಸುಮಾರು 14 ವರ್ಷದ ಬಾಲಕನೋರ್ವ ಬಂದು ಇಲ್ಲಿ ಆಟವಾಡಬೇಡಿ ಎಂದು ಗದರಿಸಿ ಜಗಳ ಮಾಡಿದ್ದಾನೆ ಎನ್ನಲಾಗಿದೆ.ಬಳಿಕ ಕೈಯಲ್ಲಿದ್ದ ದ್ರಾವಣ ಇಬ್ಬರ ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ. ಕಳೆದ 15 ದಿನದ ಹಿಂದೆ ಇದೇ ಅಪರಿಚಿತ ಬಾಲಕ ಈ ಸಹೋದರರ ನಡುವೆ ಜಗಳ ಮಾಡಿದ್ದ ಎನ್ನಲಾಗಿದೆ. ಅದರ ಸೇಡು ತೀರಿಸಿಕೊಳ್ಳಲು ಇಂದು ಬಾಟಲಿಯಲ್ಲಿ ಅಪಾಯಕಾರಿ ದ್ರಾವಣ ತಂದು ಎರಚಿದ್ದಾನೆ ಎಂಬುದಾಗಿ ತಿಳಿದುಬಂದಿದೆ.ಘಟನೆಯ ಪರಿಣಾಮ ಮಕ್ಕಳ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆ ದ್ರಾವಣವನ್ನು ಟಾಯ್ಲೆಟ್ ಕ್ಲೀನರ್ ಎಂದು ಶಂಕಿಸಲಾಗಿದ್ದು, ಪರಿಶೀಲನೆ ನಡೆದಿದೆ.ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


