ಬೆಂಗಳೂರು: ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಇನ್ನಿತರ ಭಾಗ್ಯಗಳನ್ನು ನೀವು ಕೇಳಿರಬಹುದು. ಆದರೆ ಈಗ ವಾಟಾಳ್ ನಾಗರಾಜ್ ಅವರು ರಾಜ್ಯದ ಜನತೆಗೆ ರಜೆಯ ಭಾಗ್ಯವನ್ನು ಕೊಟ್ಟಿದ್ದಾರೆ. ಮಹದಾಯಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಜನವರಿ 27 ರಂದು ಕರೆ ನೀಡಿದ್ದ ಬಂದ್ ದಿನಾಂಕ ದಿಢೀರ್ ಬದಲಾಗಿದ್ದು ಜನವರಿ 25 ರಂದು ನಡೆಸಲು ಮುಂದಾಗಿವೆ.ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್ ಪ್ರಧಾನಿ ಮೋದಿ ಅವರು ಜನವರಿ 28 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹದಾಯಿ ವಿಚಾರದಲ್ಲಿ ಅವರ ಮೌನವನ್ನು ಖಂಡಿಸಿ ಮತ್ತಿ ಶೀಘ್ರ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮೋದಿ ಭೇಟಿಯ ಮುನ್ನ ದಿನವಾದ ಜ.27 ರಂದು ಬಂದ್ ನಡೆಸುತ್ತಿರುವುದಾಗಿ ಹೇಳಿದ್ದರು.  ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿಈ ಸುದ್ದಿಗೋಷ್ಠಿ ನಡೆದು ಒಂದು ದಿನ ಕಳೆಯುವಷ್ಟರಲ್ಲಿ ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಬಂದ್ ದಿನಾಂಕವನ್ನು ಬದಲಾವಣೆ ಮಾಡಿದ್ದು, ಇದೇ 25 ರಂದು ಕರೆ ನೀಡಿರುವುದಾಗಿ ತಿಳಿಸಿದ್ದಾರೆ.ಸಾಲು ಸಾಲು ರಜೆಗಳು: ಜನವರಿ 26 ಶುಕ್ರವಾರ ಗಣರಾಜ್ಯೋತ್ಸವ, 27 ನಾಲ್ಕನೇಯ ಶನಿವಾರ ಆಗಿರುವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಶನಿವಾರ ಖಾಸಗಿ ಕಂಪೆನಿಗಳಿಗೂ ರಜೆ ಇರುತ್ತದೆ. ಇನ್ನು ಭಾನುವಾರ ಹೇಗೂ ವಾರದ ರಜೆ. ಈ ಮಧ್ಯೆ ಈಗ 25ಕ್ಕೆ ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಗಿದೆ. ಗುರುವಾರ ನಡೆಯಲಿರುವ ಬಂದ್ ಬೆಂಬಲ ನೀಡದ ಜನರಿಗೆ ಒಟ್ಟಿನಲ್ಲಿ ದೀರ್ಘ ರಜೆ ಸಿಗಲಿದೆ. ಹೀಗಾಗಿ ಜನವರಿ 25ರಂದು ನಡೆಯುವ ಬಂದ್ ಗೆ ಜನ ಹೇಗೆ ಬೆಂಬಲ ನೀಡುತ್ತಾರೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಇದನ್ನೂ ಓದಿ: ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿಗೋವಾ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಪರಿಕ್ಕರ್ ಒಬ್ಬ ನಾಲಾಯಕ್. ಅವರು ಗ್ರಾಮ ಪಂಚಾಯತ್ ಸದಸ್ಯರಾಗಲು ಆರ್ಹರಲ್ಲ. ಅವರೊಬ್ಬ ಬೇಜವಾಬ್ದಾರಿ ಮುಖ್ಯಮಂತ್ರಿಯಾಗಿದ್ದು, ಮಹದಾಯಿ ವಿಚಾರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಿತ್ತು. ಗೋವಾ ಸಿಎಂ ಯಡಿಯೂರಪ್ಪಗೆ ಪತ್ರ ಬರೆದದ್ದು ತಪ್ಪು. ಗೋವಾ ಸಿಎಂ ಯಾವ ಆಧಾರದದಲ್ಲಿ ಪತ್ರ ಬರೆದಿದ್ದಾರೆ ಎನ್ನುವುದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.ಈ ವೇಳೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್ ಅವರು, ಕರ್ನಾಟಕ ಬಂದ್ ಗೆ ಚಿತ್ರರಂಗ ಕೂಡ ಸಂಪೂರ್ಣ ಬೆಂಬಲ ನೀಡಲಿದೆ. ಅಂದು ಯಾವುದೇ ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಇರುವುದಿಲ್ಲ. ಪ್ರಧಾನಿ ಮೋದಿ ಕರ್ನಾಟಕದ ಕುಡಿಯೋ ನೀರಿನ ಬಗ್ಗೆ ಮೌನವಾಗಿದ್ದಾರೆ. ಕರ್ನಾಟಕದ ಜನರು ಮೋದಿಯವರ ಗುಲಾಮರಲ್ಲ. ಮಹದಾಯಿ ಯೋಜನೆಯನ್ನು ಮೋದಿಯವರು ಕಡೆಗಣಿಸಿದ್ದಾರೆ. ಹೀಗಾಗಿ ಮೋದಿ ರಾಜ್ಯಕ್ಕೆ ಬರುವ ದಿನ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡಿ ತೀವ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜನವರಿ 31ರ ಒಳಗಡೆ ಮಹದಾಯಿ ವಿವಾದ ಇತ್ಯರ್ಥಗೊಳಿಸಿ: ರಾಜಕೀಯ ಪಕ್ಷಗಳಿಗೆ ಡೆಡ್‍ಲೈನ್ಬಿಜೆಪಿಯ 75 ದಿನಗಳ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ರಾಷ್ಟ್ರಿಯ ಅಧ್ಯಕ್ಷ ಅಮಿತ್ ಶಾ ನವೆಂಬರ್ 2ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಚಾಲನೆ ನೀಡಿದ್ದರು. ಯಾತ್ರೆಯ ಸಮಾರೋಪ ಸಮಾರಂಭ ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ:  ಮಹದಾಯಿ ನದಿ ಮೇಲೆ 3 ರಾಜ್ಯದ ಹಕ್ಕಿದೆ, ಬೇರೆ ನದಿಪಾತ್ರಕ್ಕೆ ನೀರು ಹರಿಸಲು ಸಾಧ್ಯವಿಲ್ಲ: ಮನೋಹರ್ ಪರಿಕ್ಕರ್Sign in to your account
Username or Email Address


Password

 Remember Me


