ಚಿಕ್ಕಮಗಳೂರು: ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಧನ್ಯಶ್ರೀ ಸಾವಿಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಬಿಕಾಂ ಪದವಿ ಓದುತ್ತಿದ್ದ 20 ವರ್ಷದ ಧನ್ಯಶ್ರೀ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯಾವಾಗಲು ಮೊಬೈಲ್‍ಲ್ಲಿ ಇರುತ್ತೀಯ, ಓದುವುದಿಲ್ಲ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ತಂದೆ ಮೂಡಿಗೆರೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಘಟನೆ ಸಂಬಂಧ ಎಫ್‍ಐಆರ್ ಕೂಡ ಅದೇ ರೀತಿ ದಾಖಲಾಗಿತ್ತು. ಆದರೆ ಧನ್ಯಶ್ರೀ ಮೊಬೈಲ್‍ನಲ್ಲಿ ತನ್ನ ಸ್ನೇಹಿತನ ಜೊತೆ ತುಳುವಿನಲ್ಲಿ ಮಾಡಿರುವ ಮೆಸೇಜ್‍ಗಳು ದೊರೆತ್ತಿದ್ದು, ಈ ಸಾವು ಮೊಬೈಲ್‍ಗಾಗಿ ಆಗಿರುವಂತದ್ದಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.ಧನ್ಯಶ್ರೀ ಆ ಮೇಸೆಜ್‍ಗಳಲ್ಲಿ ಅನ್ಯಕೋಮಿನ ಪರ ಮಾತನಾಡಿದ್ದಾಳೆ. ಅಷ್ಟೇ ಅಲ್ಲದೇ ಐ ಲವ್ ಮುಸ್ಲಿಮ್ಸ್ ಎಂದು ಮೇಸೆಜ್ ಮಾಡಿದ್ದಾಳೆ. ಜೊತೆಗೆ ಇದೇ ವಿಚಾರವಾಗಿ ಆತನೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾಳೆ. ಅವಳೊಂದಿಗೆ ಮೆಸೇಜ್‍ನಲ್ಲಿ ಮಾತನಾಡಿದ ಸ್ನೇಹಿತ ಆ ಸಂದೇಶಗಳನ್ನ ಸ್ಕ್ರೀನ್ ಶಾಟ್ ತೆಗೆದು ಕೆಲ ಸಂಘಟನೆಗಳ ಗುಂಪಿಗೆ ಹಾಕಿದ್ದಾನೆ. ಆ ಸಂಘಟನೆಯವರು ಧನ್ಯಶ್ರೀ ಮನೆಗೆ ಹೋಗಿ ನಿಮ್ಮ ಮಗಳು ಅನ್ಯಕೋಮಿನ ಹುಡುಗನ ಜೊತೆ ಓಡಾಡುತ್ತಿದ್ದಾಳೆ. ಸ್ವಲ್ಪ ಬುದ್ಧಿ ಹೇಳಿ ಎಂದಿದ್ದು, ಆಕೆಗೂ ಹೆದರಿಸಿದ್ದಾರೆ.ಈ ವಿಷಯ ತಿಳಿದ ತಂದೆ ಆಕೆಗೆ ಬೈದು ಮೊಬೈಲ್ ಕಸಿದುಕೊಂಡಿದ್ದಾರೆ. ಸಾಲದಕ್ಕೆ ಈ ವಿಷಯ ಮನೆಯ ಅಕ್ಕಪಕ್ಕದವರಿಗೆ, ಹೆತ್ತವರಿಗೆ, ಸ್ನೇಹಿತರಿಗೆ ಗೊತ್ತಾಗಿದೆ ಎಂದು ಧನ್ಯಶ್ರೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಧನ್ಯಶ್ರೀ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆಂದು ಹೇಳಲಾಗುತ್ತಿದೆ. ಆದರೆ ಆ ಡೆತ್ ನೋಟ್ ಎಲ್ಲಿದೆ, ಏನಾಯ್ತು ಎಂಬ ಮಾಹಿತಿ ಇದುವರೆಗೂ ಹೊರಬಂದಿಲ್ಲ. ಪೊಲೀಸರ ನಿಷ್ಪಕ್ಷಪಾತವಾದ ತನಿಖೆಯಿಂದ ಧನ್ಯಶ್ರಿ ಸಾವಿಗೆ ಸೂಕ್ತ ಕಾರಣ ತಿಳಿದು ಬರಬೇಕಿದೆ. 






 Advertisement 




Sign in to your account
Username or Email Address


Password

 Remember Me


