ಮಂಡ್ಯ: ಹೆಂಡತಿಯೇ ಮಕ್ಕಳೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದಾಳೆ. ಆದರೆ ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಮೃತನ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.ಈ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದಿದೆ. ಕೆ.ಆರ್ ಪೇಟೆ ತಾಲೂಕಿನ 45 ವರ್ಷದ ಮಂಜೇಗೌಡ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಮಂಜೇಗೌಡ ಮನೆಯಿಂದ ಸ್ವಲ್ಪ ದೂರದಲ್ಲೇ ಇದ್ದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಮೃತರ ಪತ್ನಿ ಶಿವಮ್ಮ ಕೆ.ಆರ್ ಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ಗಂಡ ಕುಡಿದ ಮತ್ತಿನಲ್ಲಿ ನೀರಿಗೆ ಬಿದ್ದು ಸಾವನಪ್ಪಿದ್ದಾನೆ ಎಂದು ದೂರು ದಾಖಲಿಸಿದ್ದರು. ಇದನ್ನು ಒಪ್ಪದ ಮೃತ ಮಂಜೇಗೌಡನ ಮಲಸಹೋದರ ಅಶೋಕ್ ಇದೊಂದು ಕೊಲೆ. ಹೆಂಡತಿಯೇ ಮಕ್ಕಳೊಂದಿಗೆ ಸೇರಿ ಕೊಲೆ ಮಾಡಿದ್ದಾರೆ. ಇದನ್ನು ಕೊಲೆ ಎಂದು ದೂರು ದಾಖಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಇದರಿಂದ ರಾತ್ರಿಯಾದರು ಮಂಜೇಗೌಡನ ಶವ ಹಸ್ತಾಂತರಕ್ಕೆ ಅವಕಾಶ ಕೊಡದೆ ಅಶೋಕ್ ಮತ್ತು ಸಂಬಂಧಿಕರು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಪೊಲೀಸರು ಮತ್ತು ಮೃತ ಮಂಜೇಗೌಡ ಅವರ ಸಂಬಂಧಿಕರ ನಡುವೆ ಜೋರು ಧ್ವನಿಯಲ್ಲಿ ವಾಗ್ವಾದ ನಡೆದು ಸ್ಥಳದಲ್ಲಿ ಆತಂಕ ನಿರ್ಮಾಣವಾಗಿತ್ತು. ಕೊನೆಗೆ ಪೊಲೀಸರು ಸೂಕ್ತ ತನಿಖೆಯ ಭರವಸೆ ನೀಡಿ ಮೃತ ದೇಹ ತೆಗೆದುಕೊಂಡು ಹೋಗುವಂತೆ ಮನವೊಲಿಸಲು ಯತ್ನಿಸಿದ್ದರು.ಇದಕ್ಕೆ ಒಪ್ಪದ ಮೃತರ ಸಂಬಂಧಿಕರು ಮೊದಲು ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ. ಅಲ್ಲಿಯವರೆಗೂ ಅಸ್ಪತ್ರೆ ಆವರಣದಿಂದ ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.Sign in to your account
Username or Email Address


Password

 Remember Me


