ಬೆಂಗಳೂರು: ಮಗನಿಗಿರುವ ಮೂರ್ಛೆ ರೋಗ ಸರಿಪಡಿಸುವುದಾಗಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸೆಗಿದ್ದ ಕಾಮಿ ಜ್ಯೋತಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಸನ್ನ ಕುಮಾರ್ ಅಲಿಯಾಸ್ ಕಾರ್ತಿಕ್ (31) ಬಂಧಿತ ನಕಲಿ ಜ್ಯೋತಿಷಿ. ಮೊಬೈಲ್ ಕರೆ ವಿವರ ಮತ್ತು ಸಿಸಿಟಿವಿ ಆಧಾರಿಸಿ ಊದುಬತ್ತಿ ವಿತರಕನಾಗಿರುವ ಕಮಲಾನಗರದ ನಿವಾಸಿ ಪ್ರಸನ್ನ ಕುಮಾರ್ ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.ಪರಿಚಯವಾಗಿದ್ದು ಹೇಗೆ?: ಮಾರ್ಚ್ ಕೊನೆ ವಾರದಲ್ಲಿ ಮಹಿಳೆಯ ಮನೆ ಬಳಿ ಬಂದಿದ್ದ ಪ್ರಸನ್ನ ಕುಮಾರ್, ಅಂಗವಿಕಲರ ಸಂಸ್ಥೆಗೆ ದೇಣಿಗೆ ಸಂಗ್ರಹ ಮಾಡುತ್ತಿದ್ದೇನೆ. ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ. ಮಹಿಳೆ ಪ್ರಸನ್ನಕುಮಾರನಿಗೆ 200 ರೂ. ದೇಣಿಗೆ ನೀಡಿ ರಶೀದಿಯಲ್ಲಿ ಹೆಸರು ಮತ್ತು ಮೊಬೈಲ್ ನಂಬರ್ ಬರೆದಿದ್ದರು. ಈ ವೇಳೆ ಉಚಿತವಾಗಿ ಹಣ ಪಡೆಯಬಾರದು ಎಂದು ಹೇಳಿ ಮಹಿಳೆಗೆ ಊದುಬತ್ತಿ ನೀಡಿ ಸಭ್ಯನಂತೆ ನಟಿಸಿದ್ದ.ಈ ವೇಳೆ ಆತ ನಾನು ಜ್ಯೋತಿಷಿ ಮತ್ತು ನಾಟಿ ವೈದ್ಯನಾಗಿದ್ದೇನೆ. ನಿಮ್ಮ ಮಗ ಮೂರ್ಛೆ ರೋಗದಿಂದ ಬಳಲುತ್ತಿದ್ದಾನೆ ಎಂದಾಗ ಮಹಿಳೆ ಆಶ್ಚರ್ಯಗೊಂಡಿದ್ದರು. ಏಕೆಂದ್ರೆ ಮಹಿಳೆಯ ಮಗ ಕೆಲವು ದಿನಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಹೋಗಿದ್ದರೂ ಸಮಸ್ಯೆ ಪರಿಹಾರವಾಗಿರಲಿಲ್ಲ. ಈ ಭವಿಷ್ಯದ ಮಾತಿನಿಂದಾಗಿ ಮಹಿಳೆ ಪ್ರಸನ್ನ ಕುಮಾರ್ ನನ್ನು ನಂಬಿದ್ದರು.ನಂತರ ಸ್ವಲ್ಪ ಸಮಯದ ನಂತರ ಮಹಿಳೆಗೆ ಕಾಲ್ ಮಾಡಿದ ಪ್ರಸನ್ನ ಕುಮಾರ್ ನಾಟಿ ಔಷಧಿಯ ಮೂಲಕ ನಿನ್ನನ್ನು ಮಗನನ್ನು ರೋಗ ಸರಿ ಮಾಡಬಹುದು ಇಲ್ಲದಿದ್ರೆ ನಿನ್ನ ಮಗನಿಗೆ ಗಂಡಾಂತರ ಕಾದಿದೆ ಎಂದು ಮಹಿಳೆಯನ್ನು ನಂಬಿಸಿದ್ದ.ದೇಹ ಪರೀಕ್ಷೆ ಮಾಡ್ಬೇಕೆಂದ ಕಾಮಿ: ಏಪ್ರಿಲ್ ತಿಂಗಳಲ್ಲಿ ಮನೆಗೆ ಬಂದ ಪ್ರಸನ್ನ ಕುಮಾರ, ನನ್ನ ಮೈ ಮೇಲೆ ದೇವಿ ಬಂದಿದ್ದಾಳೆ, ನಿನ್ನ ದೇಹ ಪರೀಕ್ಷೆ ಮಾಡ್ಬೇಕು. ಹೇಳಿದಂತೆ ಕೇಳು ಎಂದು ಗದರಿಸಿದ್ದ. ಈ ವೇಳೆ ಮಹಿಳೆಯ ಕೈಗೆ ಸಿಗರೇಟ್ ನೀಡಿ ಸೇದುವಂತೆ ಬಲವಂತ ಪಡಿಸಿದ್ದ. ಸಿಗರೇಟ್ ಸೇದಲು ಮಹಿಳೆ ಒಪ್ಪದೇ ಇದ್ದಾಗ, ನೀನು ಸಿಗರೇಟು ಸೇದಿದರೆ ಹೊಗೆಯಲ್ಲಿ ನನಗೆ ದೇವಿ ಕಾಣಿಸಿ ನಿನ್ನ ಮಗನ ಬಗ್ಗೆ ಹೇಳ್ತಾಳೆ ಎಂದು ಹೇಳಿ ಮಹಿಳೆಯನ್ನು ಪ್ರಸನ್ನ ಕುಮಾರ್ ನಂಬಿಸಿದ್ದ.ಸಿಗರೇಟ್ ಸೇದಿ ಕೆಮ್ಮಿನಿಂದ ಕುಸಿದು ಬಿದ್ದ ನಂತರ ಮಹಿಳೆಯನ್ನು ಎದ್ದೇಳಿಸಿ ಬಟ್ಟೆ ಬಿಚ್ಚಿ ನಗುತ್ತಾ ನಿಂತುಕೊ ಎಂದಿದ್ದಾನೆ. ಮಹಿಳೆಯ ನಗ್ನ ಚಿತ್ರಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾನೆ. ನಿನ್ನ ದೇಹಕ್ಕೆ ಯಾರೋ ಮಾಟ ಮಾಡಿಸಿದ್ದಾರೆ. ನಿನ್ನ ಗಂಡನಿಗೂ ದೊಡ್ಡ ಸಮಸ್ಯೆ ಇದೆ ಎಂದು ಹೇಳಿ ನನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಎಲ್ಲಾ ದೋಷಗಳು ಹೋಗುತ್ತವೆ ಎಂದು ಹೇಳಿದಾಗ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಪ್ರಸನ್ನ ಕುಮಾರ ಮಹಿಳೆಯ ಮೇಲೆ ಬಲವಂತವಾಗಿ ಅತ್ಯಾಚಾರ ಎಸೆಗಿದ್ದಾನೆ.ಮತ್ತೆ 7 ಬಾರಿ ಸಂಭೋಗ: ಎರಡು ದಿನಗಳ ಬಳಿಕ ಮತ್ತೆ ಬಂದ ಕಾಮಿ, ನಿನ್ನ ಫೋಟೋಗಳನ್ನು ಲ್ಯಾಪ್ ಟ್ಯಾಪ್‍ಗೆ ಹಾಕಿ ನೋಡಿದಾಗ ದೇಹದಲ್ಲಿ ಮತ್ತಷ್ಟು ದೋಷಗಳು ಕಾಣಿಸಿವೆ. ನನ್ನ ಜೊತೆ ಏಳು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರೆ, ನಿನ್ನ ಕಷ್ಟಗಳೆಲ್ಲಾ ದುರವಾಗುತ್ತದೆ ಎಂದು ಹೇಳಿ ಆಕೆಯನ್ನು ಏಳು ಬಾರಿ ಸಂಭೋಗಿಸಿದ್ದಾನೆ. ಕೊನೆಗೆ ನಗ-ನಾಣ್ಯ ದಾನ ಮಾಡ್ಬೇಕು ಎಂದು ಮನೆಯಲ್ಲಿ ಎರಡು ನೆಕ್ಲೇಸ್, 6 ಬಳೆ, 2 ಚಿನ್ನದ ಸರ, ಮೂರು ಉಂಗುರ ತೆಗೆದುಕೊಂಡು ಪೂಜೆಯ ಕೊನೆಯ ಹಂತದಲ್ಲಿ 21 ಲಕ್ಷ ರೂ. ನೀಡಬೇಕೆಂದು ಹೇಳಿದ್ದಾನೆ.ಪ್ರಸನ್ನ ಕುಮಾರ್ ಮಾತುಗಳನ್ನು ನಂಬಿದ ಮಹಿಳೆ ಗಂಡನಿಗೆ ಗೊತ್ತಾಗದಂತೆ ಚೆಕ್ ಮತ್ತು ನಗದು ರೂಪದಲ್ಲಿ 20.7 ಲಕ್ಷ ಹಣ ನೀಡಿದ್ದಾರೆ. ಹಣ ತೆಗೆದುಕೊಂಡ ಬಳಿಕ ಆರೋಪಿ ಪ್ರಸನ್ನ ಕುಮಾರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ಕೊನೆಗೆ ದಿಕ್ಕು ತೋಚದ ಮಹಿಳೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಅತ್ಯಾಚಾರ (ಐಪಿಸಿ 376), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (504), ಜೀವ ಬೆದರಿಕೆ (506) ವಂಚನೆ (420), ಸುಲಿಗೆ (384), ಹಾಗೂ ಅಶ್ಲೀಲ ಪದಬಳಕೆ ಅಥವಾ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದ (509) ಆರೋಪಗಳಡಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 5 ದಿನ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


