ಉಡುಪಿ: ದೇವರನ್ನು ಕಾಶ್ಮೀರಕ್ಕೆ ಹುಡುಕಿಕೊಂಡು ಹೋಗುವ ಡೋಂಗಿ ಆಸ್ತಿಕ ನಾನಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಡಾ. ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಶ್ರೀಗಳ ನೇತೃತ್ವದಲ್ಲಿ ನಡೆದ ಬಾರ್ಕೂರು ಬಂಟ ಮಹಾಸಂಸ್ಥಾನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದರು.ಮಹಾಸಂಸ್ಥಾನ ಲೋಕಾರ್ಪಣೆ ಮಾಡಿದ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾನು ದೇವರನ್ನು ನಂಬದ ನಾಸ್ತಿಕನಲ್ಲ. ಹಾಗಂತ ಕೆಲ ಆಸ್ತಿಕರ ಡೋಂಗಿತನ ನನ್ನಲ್ಲಿಲ್ಲ ಎಂದು ಅವರು ಹೇಳಿದರು. ಕಷ್ಟ ಬಂದಾಗ ನನ್ನೂರ ದೇವರು ಸಾಕು. ಮೈಸೂರಿನಲ್ಲಿ ಸಾಕಷ್ಟು ದೇವಸ್ಥಾನಗಳಿಗೆ ಹೋಗ್ತೇನೆ. ಎಲ್ಲಾ ಮಾಡಿ ಆತ್ಮಶುದ್ಧಿಯೇ ಇಲ್ಲದಿದ್ದರೆ ಮಾಡಿದ್ದೆಲ್ಲ ವ್ಯರ್ಥ ಎಂದು ಹೇಳಿದರು.ದೇವರನ್ನು ಒಲಿಸಲು ಉದ್ದುದ್ದದ ಮಂತ್ರ- ಸಂಸ್ಕೃತದ ಶ್ಲೋಕ ಹೇಳಬೇಕಾಗಿಲ್ಲ. ದೇವರ ಆರಾಧನೆ ಮಾಡಲು ಶುದ್ಧ ಮನಸ್ಸು ಬೇಕು ಎಂದರು.ನೂರಾರು ದೈವಗಳನ್ನು ಒಂದೇ ಸೂರಿನಡಿಯಲ್ಲಿ ನಂಬಿ- ಸೇವೆ ನೀಡುವ ವ್ಯವಸ್ಥೆಯನ್ನು ಬಾರ್ಕೂರಿನಲ್ಲಿ ಮಾಡಲಾಗಿದೆ.ಇದು ಕರಾವಳಿಯ ಬಂಟ ಸಮುದಾಯದದಲ್ಲಿ ಬಹಳ ಚರ್ಚೆಯಲ್ಲಿದೆ. ಸಂಸ್ಥಾನ- ಸ್ವಾಮೀಜಿ ನೇಮಕ ವ್ಯವಸ್ಥೆಗೆ ಭಾರೀ ವಿರೋಧವಿದೆ. ಈ ನಡುವೆ ಸಿಎಂ ಸಂಸ್ಥಾನ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು.ಸಿದ್ದರಾಮಯ್ಯ ತುಳುನಾಡಿನ ಸಾಂಪ್ರದಾಯಿಕ ಬಂಟ ಸಮುದಾಯದ ಪೇಟ ತೊಟ್ಟು ಓಡಾಡಿದರು. ಸಂಸ್ಥಾನದಲ್ಲಿರುವ ದೈವಸ್ಥಾನ- ನಾಗನ ಗುಡಿಗಳಿಗೆ ಭೇಟಿಕೊಟ್ಟು ಮಾಹಿತಿಗಳನ್ನು ಸಂಗ್ರಹ ಮಾಡಿದರು. ಈ ಸಂದರ್ಭ ತನ್ನ ಆಸ್ತಿಕತೆಯ ಬಗ್ಗೆ ಮಾತನಾಡಿದರು.
Sign in to your account
Username or Email Address


Password

 Remember Me


