ಬೆಂಗಳೂರು: ನೀವೇನಾದ್ರು ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದೀರಾ? ಯಾರಾದ್ರೂ ಕೆಲಸ ಕೊಡಿಸುವ ಭರವಸೆ ನೀಡ್ತಿದ್ದಾರಾ? ಹಾಗಿದ್ರೆ ಹುಷಾರಾಗಿರಿ. ಯಾಕಂದ್ರೆ ಬೆಂಗಳೂರಿನಲ್ಲಿ ವಿದ್ಯಾವಂತ ನಿರುದ್ಯೋಗಿಗಳನ್ನೇ ಟಾರ್ಗೆಟ್ ಮಾಡೋ ಒಂದು ತಂಡ ಸರ್ಕಾರಿ ಕೆಲಸದ ಭರವಸೆ ನೀಡಿ ಕೋಟ್ಯಾಂತರ ರೂಪಾಯಿ ಹಣ ದೋಚುತ್ತಿದೆ.ಆಶಾ ಎಂಬ ಮಹಿಳೆ ವಿದ್ಯಾವಂತ ಯುವಕರಿಗೆ ಸರ್ಕಾರಿ ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡುತ್ತಿದ್ದಾಳೆ. ಈಕೆಯ ಹಿಂದೆ ಒಂದು ತಂಡವೇ ಇದೆ. ಆಶಾ ಮಗಳು ಪ್ರತೀಕ್ಷಾ, ಅಳಿಯ ಕಾರ್ತಿಕ್, ತಮಿಳುನಾಡು ಮೂಲದ ಸುಂದರವೇಲು, ಎಚ್‍ಎಎಲ್ ಮುಖ್ಯ ಎಂಜಿನಿಯರ್ ರವಿಕುಮಾರ್ ಅನ್ನೋರು ಈ ವಂಚನೆಯ ಜಾಲದಲ್ಲಿದ್ದಾರೆ. ಆಶಾ ಮತ್ತು ತಂಡ ಪ್ರತಿಷ್ಠಿತ ಹೋಟೆಲ್, ಕಾಫಿ ಡೇ, ಪಬ್‍ಗಳಲ್ಲಿ ನಡೆಸುವ ಡೀಲ್‍ಗಳೆಲ್ಲಾ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವಂಚಕರ ತಂಡ ಸರ್ಕಾರದ ಇಲಾಖೆಗಳ ನಕಲಿ ಸೀಲ್, ಸಹಿ ಹಾಗೂ ಲೆಟರ್ ಪ್ಯಾಡ್ ಹೊಂದಿದ್ದು, ಅಂಚೆ ಮೂಲಕ ಈ ಅಮಾಯಕರಿಗೆ ಆಫರ್ ಲೆಟರ್ ಕಳುಹಿಸಿ ಹಣ ದೋಚಿದ್ದಾರೆ. ನೆಲಮಂಗಲ ಸೇರಿದಂತೆ ಇತರೆ ಜಿಲ್ಲೆಗಳ ಜನ ಇವರ ವಂಚನೆಗೆ ಬಲಿಯಾಗಿದ್ದಾರೆ. ಖಾಸಗಿ ಕಾಲೇಜಿನ ಉಪಪ್ರಾಂಶುಪಾಲರೊಬ್ಬರು 17 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿದ್ದಾರೆ.ಮೋಸ ಹೋದವರು ಹಣ ಕೇಳಲು ಹೋದಾಗ ಆಶಾ ಚೆಕ್ ನೀಡಿದ್ದಳು. ಆದ್ರೆ ಆ ಚೆಕ್‍ಗಳು ಬೌನ್ಸ್ ಆಗಿವೆ. ಈಕೆಯ ವಿರುದ್ಧ ಜೆಪಿ ನಗರ, ಜಯನಗರ, ಮಲ್ಲೇಶ್ವರಂ, ಹಾಗೂ ನೆಲಮಂಗಲದಲ್ಲಿ ದೂರು ದಾಖಲಾಗಿದೆ. ಆದ್ರೆ ಪೊಲೀಸರು ಈಕೆಯನ್ನ ಬಂಧಿಸಿದ ಕೆಲವೇ ಗಂಟೆಗಳಲ್ಲಿ ಬೇಲ್ ಮೇಲೆ ಹೊರಬಂದಿದ್ದಾಳೆ. ಈಕೆಯಿಂದ ಮೋಸ ಹೋದ ಬಡವರು ದಿಕ್ಕು ತೋಚದಂತಾಗಿದ್ದಾರೆ. ಸಾಲ ಮಾಡಿ, ಮನೆ ಮಾರಿ, ಅಸ್ತಿ ಪತ್ರ ಅಡವಿಟ್ಟು ಹಣ ಕೊಟ್ಟವರು ಕಣ್ಣೀರು ಹಾಕ್ತಿದ್ದಾರೆ.ಪೊಲೀಸರು ವಂಚಕರ ವಿರುದ್ಧ ಕ್ರಮ ಕೈಗೊಂಡು ವಂಚನೆಗೆ ಒಳಗಾದವ್ರಿಗೆ ನ್ಯಾಯ ಕೊಡಿಸಬೇಕಿದೆ. ಸರ್ಕಾರಿ ಕೆಲಸದ ಆಸೆಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗಳು ಎಚ್ಚೆತ್ತುಕೊಳ್ಳಬೇಕಿದೆ. Sign in to your account
Username or Email Address


Password

 Remember Me


