ರಾಯಚೂರು: ಹೈದ್ರಾಬಾದ್-ಕರ್ನಾಟಕ ಭಾಗದ ಏಕೈಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅನ್ನೋ ಹೆಗ್ಗಳಿಕೆ ಹೊಂದಿರೋ ರಾಯಚೂರಿನ ಓಪೆಕ್ ಆಸ್ಪತ್ರೆಗೆ ಮತ್ತೊಮ್ಮೆ ಭರ್ಜರಿ ಸರ್ಜರಿ ನಡೆಸಲು ಸಿದ್ಧತೆಗಳು ನಡೆದಿವೆ. ಸುಮಾರು 18 ತಿಂಗಳ ಕಾಲ ಬಂದ್ ಆಗಿ ಪುನಃ ಆರಂಭಗೊಂಡ ಆಸ್ಪತ್ರೆ ವೈದ್ಯರಿಲ್ಲದೆ ರೋಗಗ್ರಸ್ಥವಾಗಿದೆ. ಈಗ ಮಾನ ಉಳಸಿಕೊಳ್ಳಲು ಇಲ್ಲಿನ ಜನಪ್ರತಿನಿಧಿಗಳು ಖಾಸಗಿಯವರಿಗೆ ಆಸ್ಪತ್ರೆ ನೀಡಲು ಮುಂದಾಗಿದ್ದಾರೆ. ಕೇವಲ ಹೆಸರಿಗೆ ಮಾತ್ರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಾಗಿರುವ ರಾಯಚೂರಿನ ಓಪೆಕ್ ಈಗ ಖಾಸಗಿಯವರ ಪಾಲಾಗಲಿದೆ. 36 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ರೂ ಮೂರು ವರ್ಷಗಳಿಂದ ವೈದ್ಯರಿಲ್ಲದೆ ಬಿಕೋ ಎನ್ನುತ್ತಿರುವ ಆಸ್ಪತ್ರೆಗೆ ಮತ್ತೆ ಸರ್ಜರಿ ಮಾಡಲು ಶಾಸಕರು, ಸಂಸದರು ಮುಂದಾಗಿದ್ದಾರೆ. ಓಪೆಕ್ ಆಸ್ಪತ್ರೆಯನ್ನ ರಿಮ್ಸ್ ನಿಂದ ಬೇರ್ಪಡಿಸಿ ಖಾಸಗಿಯವರಿಗೆ ನೀಡಲು ತೀರ್ಮಾನಿಸಿದ್ದು ಸರ್ಕಾರ ಅಂತಿಮ ಮುದ್ರೆ ಒತ್ತಬೇಕಿದೆ. 2000ದಲ್ಲಿ ಅಪೋಲೋ ಸಹಯೋಗದೊಂದಿಗೆ ಆರಂಭವಾದ ಓಪೆಕ್ 2013ರಲ್ಲಿ ಬಂದ್ ಆಗಿತ್ತು. ರಿಮ್ಸ್ ಮೆಡಿಕಲ್ ಕಾಲೇಜಿಗೆ ಅನುಕೂಲವಾಗಲು 2014 ರಲ್ಲಿ ಪುನಃ ಆರಂಭಿಸಲಾಯಿತಾದ್ರೂ ಆಸ್ಪತ್ರೆಗೆ ವೈದ್ಯರು ಮಾತ್ರ ಬಂದಿಲ್ಲ. ಒಟ್ಟು 12 ವಿಭಾಗಗಳಲ್ಲಿ ಕೇವಲ 6 ವಿಭಾಗಗಳಿಗೆ ಮಾತ್ರ ಒಬ್ಬೊಬ್ಬ ವೈದ್ಯರಿದ್ದು ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ.ರಿಮ್ಸ್ ಆಸ್ಪತ್ರೆ ಪುನಾರಂಭಗೊಂಡಾಗ ಹಿಂದೆ ಇದ್ದ 286 ಸಿಬ್ಬಂದಿಗಳಲ್ಲಿ ಕೇವಲ 100 ಜನರನ್ನ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಈಗ ಪುನಃ ಖಾಸಗಿಯವರಿಗೆ ಆಸ್ಪತ್ರೆಯನ್ನ ನೀಡುತ್ತಿರುವುದರಲ್ಲಿ ಲಾಭಿ ಇದೆ ಅಂತ ನೌಕರರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆಸ್ಪತ್ರೆ ಖಾಸಗಿಯವರ ಪಾಲಾದ್ರೆ ಬಡರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವ ಭರವಸೆಗಳನ್ನ ಸಾರ್ವಜನಿಕರು ತಳ್ಳಿಹಾಕಿದ್ದಾರೆ. ಆದ್ರೆ ಸರ್ಕಾರ ಆಸ್ಪತ್ರೆಯನ್ನ ವ್ಯವಸ್ಥಿತವಾಗಿ ನಡೆಸುವಲ್ಲಿ ಸೋತಿದ್ದರಿಂದ ಚಾರಿಟೇಬಲ್ ಟ್ರಸ್ಟ್ ಅಥವಾ ಎನ್‍ಜಿಓ ಗೆ ನೀಡುವುದು ಉತ್ತಮ ಎಂದು ಸಂಸದ ಬಿ.ವಿ.ನಾಯಕ್ ಹೇಳಿದ್ದಾರೆ.ಒಟ್ನಲ್ಲಿ, ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವ ಓಪೆಕ್ ಆಸ್ಪತ್ರೆಗೆ ಮರುಜೀವ ನೀಡಬೇಕಿದೆ. ಚಿಕಿತ್ಸೆಗಾಗಿ ಹೈದ್ರಾಬಾದ್, ಬೆಂಗಳೂರು, ಬಳ್ಳಾರಿ ಅಂತೆಲ್ಲಾ ತೆರಳುವ ಬಡರೋಗಿಗಳಿಗೆ ಜಿಲ್ಲೆಯಲ್ಲೆ ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕಿದೆ. ಈಗಲಾದ್ರೂ ಸರ್ಕಾರ ಎಚ್ಚೆತ್ತು ಇತ್ತ ಗಮನಹರಿಸಬೇಕಿದೆ.  Sign in to your account
Username or Email Address


Password

 Remember Me


