ಬೆಳಗಾವಿ: ಕಂಠಪೂರ್ತಿ ಕುಡಿದು ಗೆಳೆಯನನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಾಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಮುರಳೀಧರ್ ವಸಂತ್ ನಿಕ್ಕಂ (33) ಕೊಲೆಯಾದ ವ್ಯಕ್ತಿ. ಫೆಬ್ರವರಿ 10 ರಂದು ಮುರಳೀಧರ್ ಹಾಗೂ ಅವನ ಸ್ನೇಹಿತರಾದ ಬಾಬಲೆ ಗೋಪಾಲ್ ಪವಾರ್ (34), ಹಲಸಿ ಅರಣ್ಯದ ಆದಿವಾಸಿ ಬಬನ ವಿಠ್ಠಲ್ ಪವಾರ್ (35), ಹಲಸಾಲ ಅರಣ್ಯದ ಆದಿವಾಸಿ ಅಂಕುಶ್ ದುಲೇಖಾನ್ ನಿಕ್ಕಂ (34) ಮತ್ತು ಕುಟಿನೋನಗರ ಅರಣ್ಯದ ಆದಿವಾಸಿ ಗೋಪಾಲ್ ಅಜರುನ್ ಪವಾರ (28) ಐವರು ಸೇರಿ ಪಾರ್ಟಿ ಮಾಡಿದ್ದಾರೆ.ಎಲ್ಲರೂ ಕಂಠಪೂರ್ತಿ ಕುಡಿದು ಐವರ ಮಧ್ಯೆ ಕ್ಷುಲಕ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಬಾಬಲೆ, ಬಬನ, ಅಂಕುಶ್ ಮತ್ತು ಗೋಪಾಲ್ ನಾಲ್ವರು ಸೇರಿ ಮುರಳೀಧರನನ್ನು ಕೊಲೆ ಮಾಡಿ ನಾಗರಾಳಿ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ. ಕೊಲೆ ಬಗ್ಗೆ ಯಾರು ದೂರು ನೀಡಿರಲಿಲ್ಲ. ಈ ನಾಲ್ವರು ಒಂದೇ ಕಡೆ ಕಟ್ಟಿಗೆ ಕಡಿಯುವ ಕೆಲಸ ಮಾಡುತ್ತಿದ್ದರು. ಮುರಳೀಧರ್ ಕೆಲಸಕ್ಕೆ ಬಾರದೇ ಕಣ್ಮರೆಯಾಗಿದ್ದರಿಂದ ಗುತ್ತಿಗೆದಾರ ಪೊಲೀಸರಿಗೆ ದೂರು ನೀಡಿದ್ದಾರೆ.ಗುತ್ತಿಗೆದಾರರ ದೂರು ಆಧರಿಸಿ ತನಿಖೆಗಿಳಿದ ನಂದಗಢ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಳೆಯನನ್ನು ಕೊಲೆ ಮಾಡಿದ ಬಾಬಲೆ, ಬಬನ್, ಅಂಕುಶ್ ಮತ್ತು ಗೋಪಾಲ್ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರ ಮಾಹಿತಿ ಆಧಾರದ ಮೇಲೆ ಎಸಿ ರಾಜಶ್ರೀ ಅವರ ನೇತೃತ್ವದಲ್ಲಿ ಹೂತಿಡಲಾಗಿದ್ದ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.  Sign in to your account
Username or Email Address


Password

 Remember Me


