ಉಡುಪಿ: ಜಿಲ್ಲೆಯ ಹಾವಂಜೆ ಕಾಡಿನಲ್ಲಿರುವ ಪಾಳು ಬಾವಿಯಲ್ಲಿ ಬಿದ್ದಿದ್ದ ಎರಡು ಹೆಬ್ಬಾವುಗಳನ್ನು ಉರಗತಜ್ಞ, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.ಹಾವಂಜೆ ಸಮೀಪದ ಜಮೀನನ್ನು ಲೆವೆಲ್ ಮಾಡುವ ಸಂದರ್ಭ ಹೆಬ್ಬಾವುಗಳು ಬಾವಿಗೆ ಬಿದ್ದಿತ್ತು. ಸುಮಾರು ಐದಾರು ತಿಂಗಳ ಕಾಲ ಯಾರ ಕಣ್ಣಿಗೂ ಹಾವುಗಳು ಕಾಣಿಸಿಕೊಂಡಿರಲಿಲ್ಲ. ವಾರಗಳ ಹಿಂದೆ ಸ್ಥಳೀಯರಿಗೆ ಹೆಬ್ಬಾವು ಇರುವುದನ್ನು ನೋಡಿದ್ದಾರೆ.ಉಡುಪಿಯ ಸಮಾಜ ಸೇವಕ- ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕ ಮಾಡಲಾಯ್ತು. ನಿತ್ಯಾನಂದ ಒಳಕಾಡು ಉರಗತಜ್ಞ ಗುರುರಾಜ್ ಸನಿಲ್ ಮತ್ತು ಅಗ್ನಿಶಾಮಕ ದಳವನ್ನು ಕರೆಸಿದರು. ಉರಗ ತಜ್ಞ ಗುರುರಾಜ್ ಅಗ್ನಿಶಾಮಕ ದಳದ ಸಹಾಯದಿಂದ ಬಾವಿಗಿಳಿದು ಮೊದಲು ಒಂದು ಹಾವನ್ನು ರಕ್ಷಣೆ ಮಾಡಿದರು.ಅದಾಗ್ಲೆ ಇನ್ನೊಂದು ಗಂಡು ಹೆಬ್ಬಾವು ಬಾವಿಯೊಳಗಿದ್ದ ಬಿಲವನ್ನು ಸೇರಿತ್ತು. ಬಿಲ ಹೊಕ್ಕಿದ್ದ ಹಾವನ್ನು ಹೊರ ತೆಗೆಯಲು ಕೆಲಕಾಲ ಹರಸಾಹಸ ಪಡಬೇಕಾಯ್ತು. ಸುತ್ತಲೂ ಹೊಂಡವನ್ನು ತೋಡಿ ಇನ್ನೊಂದು ಹಾವನ್ನು ಹೊರ ತೆಗೆಯಲಾಯ್ತು.ಡಿಸೆಂಬರ್ ನಿಂದ ಮಾರ್ಚವರೆಗೆ ಹಾವುಗಳು ಮಿಲನ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಈ ಸಂದರ್ಭ ಹೆಬ್ಬಾವುಗಳು ಬಾವಿಗೆ ಬಿದ್ದಿರಬಹುದು ಎಂದು ಗುರುರಾಜ್ ಹೇಳಿದ್ದಾರೆ. ರಕ್ಷಿಸಲ್ಪಟ್ಟ ಜೋಡಿ ಹೆಬ್ಬಾವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗುರುರಾಜ್ ಹಸ್ತಾಂತರ ಮಾಡಿದರು.ಐದಾರು ತಿಂಗಳಿಂದ ಆಹಾರವಿಲ್ಲದೆ ಹೆಬ್ಬಾವುಗಳು ಸಿಕ್ಕಾಪಟ್ಟೆ ಸೊರಗಿ ಹೋಗಿದ್ದವು. ನೀರಿರುವ ಕಾಡಿನಲ್ಲಿ ಮೊಟ್ಟೆಗಳನ್ನು ನೀಡಿ ಹಾವುಗಳನ್ನು ಕೆಲದಿನ ಸಂರಕ್ಷಿಸಬೇಕು. ನಂತರ ಅರಣ್ಯಕ್ಕೆ ಹೊಂದಿಕೊಂಡ ಮೇಲೆ ಹೊರಗೆ ಬಿಡಬಹುದು ಎಂದು ಉರಗತಜ್ಞ ಗುರುರಾಜ್ ಹೇಳಿದ್ದಾರೆ. ಉರಗತಜ್ಞರು- ಅಗ್ನಿಶಾಮಕದಳ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಈ ಸಂದರ್ಭದಲ್ಲಿ ಅಭಿನಂದಿಸಿದರು.  Sign in to your account
Username or Email Address


Password

 Remember Me


