ಹಾಸನ: ಎತ್ತಿನಹೊಳೆ (Ettinhole) ಯೋಜನೆಯ ಟ್ರಯಲ್ ರನ್ ಪ್ರಾರಂಭ ಮಾಡಿದ್ದೇವೆ. ಯೋಜನೆಗಾಗಿ ಎಂಜಿನಿಯರ್‌ಗಳು ಸೇರಿದಂತೆ ಪ್ರತಿಯೊಬ್ಬ ನೌಕರನು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈಗ 550 ಕ್ಯುಸೆಕ್ ನೀರು ಹರಿಯುತ್ತಿದೆ. ಇದರ ಆರು ಪಟ್ಟು ನೀರು ಉದ್ಘಾಟನೆ ದಿನ ಹರಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಬಹಳ ಜನ ಭೂಮಿ ಕೊಟ್ಟಿದ್ದಾರೆ. ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದನ್ನು ಜನರಿಗೆ ಅರ್ಪಣೆ ಮಾಡುತ್ತೇವೆ. ಉದ್ಘಾಟನೆ ದಿನ ಸರಿಯಾದ ವ್ಯವಸ್ಥೆ ಮಾಡಿಕೊಂಡು ಸಾವಿರಾರು ಜನ ಸೇರುವಂತಹ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಈಗ ಯೋಜನೆ ಪೂರ್ಣಗೊಳ್ಳಲು ಸ್ವಲ್ಪ ತೊಡಕಿದೆ ಹಾಗಾಗಿ ವಾಣಿವಿಲಾಸ ಸಾಗರ ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳಲು ನೀರು ಹರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.ರಾಜ್ಯದ ಜನತೆಗೆ ನಾವು ಮಾತು ಕೊಟ್ಟಿದ್ದೆವು, ಈಗ ನುಡಿದಂತೆ ನಡೆದಿದ್ದೇವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಟೀಕೆಗಳು ಸಾಯ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಈಗ ಟೀಕೆಗಳು ಸತ್ತು ಹೋಗಿವೆ. ಕೆಲಸ ಮಾತ್ರ ಉಳಿದಿದೆ. ಇನ್ನೂ 10 ದಿನಗಳಲ್ಲಿ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ.ಏಳು ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಸ್ವಲ್ಪ ರಾಮನಗರ ಜಿಲ್ಲೆಗಳಿಗೆ ಈ ಯೋಜನೆಯಿಂದ ಪ್ರಯೋಜನ ಆಗಲಿದೆ. ಆ ಜಿಲ್ಲೆಗಳ ಜನಪ್ರತಿನಿಧಿಗಳು ಹಾಗೂ ಜನರು ಪಕ್ಷಾತೀತವಾಗಿ ಸಹಕಾರ ಕೊಟ್ಟಿದ್ದು, ಅವರೆಲ್ಲರನ್ನೂ ಆಹ್ವಾನಿಸುತ್ತೇವೆ ಎಂದಿದ್ದಾರೆ.ಎತ್ತಿನಹೊಳೆ ಯೋಜನೆಗೆ ಮೊದಲ ಹಂತದ ಪ್ರಾಯೋಗಿಕ ನೀರು ಹರಿವಿಗೆ ಬುಧವಾರ ಸಂಜೆ ಸಕಲೇಶಪುರ ತಾಲ್ಲೂಕಿನ, ಕಪ್ಪಳ್ಳಿ ಬಳಿ ಡಿಸಿಎಂ ಚಾಲನೆ ನೀಡಿದ್ದರು. ಇಂದು (ಗುರುವಾರ) ಹೆಬ್ಬನಹಳ್ಳಿ ಬಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಸಿಎಂ ಜಮೀನಿಗೆ ಅರ್ಜಿ ಕೊಟ್ಟಿದ್ರು, ಬಿಜೆಪಿಯವ್ರು ಜಾಗ ಕೊಟ್ಟಿದ್ದಾರೆ
ತಮ್ಮ ವಿರುದ್ಧ ಹೈಕೋರ್ಟ್‍ನಲ್ಲಿ ಇಂದು ತೀರ್ಪು ನೀಡುವ ವಿಚಾರವಾಗಿ, ನನಗೆ ದೇವರ ಬಗ್ಗೆ, ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಅವರು ಏನು ಕೊಟ್ಟರೂ ಪ್ರಸಾದ ಎಂದು ಸ್ವೀಕಾರ ಮಾಡುತ್ತೇನೆ. ಇನ್ನೂ ಸಿಎಂ ವಿರುದ್ಧದ ಹೈಕೋರ್ಟ್‍ನಲ್ಲಿ ಪ್ರಾಸಿಕ್ಯೂಷನ್ ತೀರ್ಪು ವಿಚಾರವಾಗಿ, ಸಿಎಂ ಏನು ಮಾಡಿದ್ದಾರೆ ಎಂದು ಎಲ್ಲರೂ ಕಾತುರದಿಂದ ಇದ್ದಾರೆ. ಏನು ಆಗುವುದಿಲ್ಲ, ಇದು ಅಷ್ಟು ಸುಲಭವಾದ ಕೆಲಸವಲ್ಲ. ಅವರು ಏನಾದರೂ ಸಹಿ ಮಾಡಿ, ತಪ್ಪು ಮಾಡಿದ್ರೆ ಪರ್ವಾಗಿಲ್ಲ, ಜಮೀನು ಕಳೆದುಕೊಂಡಿದ್ದಾರೆ, ಅರ್ಜಿ ಕೊಟ್ಟಿದ್ದಾರೆ. ಬಿಜೆಪಿಯವರು ಅರ್ಜಿ ಪಡೆದುಕೊಂಡು ಸೈಟ್ ಕೊಟ್ಟಿದ್ದಾರೆ. ಅಷ್ಟು ಬಿಟ್ಟರೆ ಇನ್ನೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.ಸಿದ್ದರಾಮಯ್ಯ (Siddaramaiah) ಪುತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರ ನಾನು ಅವರಿಗೆಲ್ಲಾ, ಆ ನಕಲಿಗೆಲ್ಲಾ ಉತ್ತರ ಕೊಡಲ್ಲ. ಅಸಲಿಯತ್ತಿಗೆ ಮಾತ್ರ ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ.Sign in to your account
Username or Email Address


Password

 Remember Me


