ಹಾವೇರಿ: ಸಾಮಾನ್ಯವಾಗಿ ಮನುಷ್ಯರ ಪುಣ್ಯತಿಥಿಯನ್ನು ಮಾಡೋದನ್ನು ನಾವು ನೋಡಿದ್ದೇವೆ. ಅದರೆ ಈ ಗ್ರಾಮದಲ್ಲಿ ಹೋರಿಯ (Bull) ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ಶರವೇಗದ ಓಟಗಾರ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯ (Chamundi Express Bull) ಪುಣ್ಯತಿಥಿ ಕಾರ್ಯವನ್ನು ಮಾಡಿದ್ದಾರೆ. ಇಡೀ ಊರ ಜನರು ಹಣ ಹಾಕಿ, ಮನುಷ್ಯರಂತೆಯೇ ಈ ವಿಶೇಷ ಹೋರಿಯ ಪುಣ್ಯತಿಥಿ ಕಾರ್ಯವನ್ನು ಮಾಡಿದ್ದಾರೆ.ಹಾವೇರಿ (Haveri) ತಾಲೂಕಿನ ಚಿಕ್ಕಲಿಂಗದಹಳ್ಳಿ ಗ್ರಾಮದಲ್ಲಿ ರಾಜ್ಯಮಟ್ಟದ ಹೋರಿ ಹಬ್ಬದಲ್ಲಿ ಸಾಕಷ್ಟು ಹೆಸರು ಮಾಡಿದ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯ ಪುಣ್ಯತಿಥಿಯನ್ನು ಗ್ರಾಮಸ್ಥರೆಲ್ಲಾ ಸೇರಿ ನೆರವೇರಿಸಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಗ್ರಾಮದ ರೈತ ಮೆಹಬೂಬ್ ಸಾಬ್ ದೇವಗಿರಿ ಅವರ ಮನೆಯಲ್ಲಿ ಈ ಹೋರಿ ಜನಿಸಿತ್ತು. ಜಮೀನು ಕೆಲಸದ ಜೊತೆಗೆ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಶರವೇಗದಲ್ಲಿ ಓಡುವ ಮೂಲಕ ಚಾಮುಂಡಿ ಎಕ್ಸ್‌ಪ್ರೆಸ್ ಎಂದು ಹೆಸರು ಮಾಡಿತ್ತು.ಈ ಹೋರಿಯನ್ನು ಕಳೆದ 3 ವರ್ಷಗಳ ಹಿಂದೆ ಶಿಕಾರಿಪುರಕ್ಕೆ 18 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು. ನಂತರ ಶಿಕಾರಿಪುರ ಮಾಲೀಕರು ಸಹ ಮಾಸೂರಿಗೆ ಮತ್ತೆ ಮಾರಾಟ ಮಾಡಿದ್ದರು. ಚಾಮುಂಡಿ ಎಕ್ಸ್‌ಪ್ರೆಸ್ ಹೆಸರು ಬದಲಿಸಿ ಮೂಕಾಂಬಿಕಾ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿದ್ದರು. 9 ದಿನಗಳ ಹಿಂದೆ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ನಿಧನವಾಗಿದ್ದು, ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಇಂದು ಹೋರಿಯ ಹುಟ್ಟೂರಾದ ಚಿಕ್ಕಲಿಂಗದಹಳ್ಳಿಯ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸೇರಿ ಪುಣ್ಯತಿಥಿ ಮಾಡಿದ್ದಾರೆ. ಗ್ರಾಮದ ಪ್ರತಿ ಮನೆಯವರು ಪುಣ್ಯತಿಥಿಯಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.ಸಾಮಾನ್ಯವಾಗಿ ಮನುಷ್ಯರು ಮೃತಪಟ್ಟಾಗ ತಿಥಿ ಕಾರ್ಯ ನೆರವೇರಿಸಲಾಗುತ್ತದೆ. ಅದರಂತೆಯೇ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಮೃತಪಟ್ಟು 9 ದಿನಗಳಾಗಿದ್ದರಿಂದ ಹೋರಿ ಅಭಿಮಾನಿಗಳು ನೆಚ್ಚಿನ ಹೋರಿಗೆ ತಿಥಿ ಕಾರ್ಯ ನೆರವೇರಿಸಿದ್ದಾರೆ. ಮೃತ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯ ಭಾವಚಿತ್ರ ಮಾಡಿಸಿ, ಅದರ ಮುಂದೆ ಹಣ್ಣುಗಳು, ಸಿಹಿ ತಿನಿಸುಗಳನ್ನಿಟ್ಟು ಗ್ರಾಮದಲ್ಲಿನ ಸ್ವಾಮಿಯನ್ನು ಕರೆಯಿಸಿ ಅಗಲಿದ ಹೋರಿಯ ತಿಥಿಯ ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲುಚಾಮುಂಡಿ ಎಕ್ಸ್‌ಪ್ರೆಸ್ ಹೋರಿಯು ಬೈಕ್, ಚಿನ್ನ, ಬೆಳ್ಳಿ, ಟ್ರಜೂರಿ ಸೇರಿದಂತೆ ಹಲವು ಬಹುಮಾನ ಗೆದ್ದಿದೆ. ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಹಬ್ಬದ ಅಖಾಡದಲ್ಲಿ ಚಾಮುಂಡಿ ಎಕ್ಸ್ಪ್ರೆಸ್ ಹೋರಿ ದೊಡ್ಡ ಹೆಸರು ಮಾಡಿದ್ದರಿಂದ ಅಭಿಮಾನಿಗಳು ಹೋರಿಯ ತಿಥಿ ಕಾರ್ಯದಲ್ಲಿ ಭಾಗವಹಿಸಿ, ಹೋರಿಗೆ ಪೂಜೆ ಸಲ್ಲಿಸಿ, ಊಟ ಸವಿದು ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ಹೆಡ್ ಕಾನ್ಸ್‌ಟೇಬಲ್ ಮನೆಗೆ ಕನ್ನ
Sign in to your account
Username or Email Address


Password

 Remember Me


